ಜಾತ್ಯಾತೀತ ಜನತಾ ದಳದ ಗುರುಮಠಕಲ್ ಶಾಸಕ ನಾಗನಗೌಡ ಕಂದಕೂರು ಅವರ ಪುತ್ರ ಶರಣಗೌಡರಿಗೆ ಕರೆ ಮಾಡಿದ ವಿಚಾರದಲ್ಲಿ ಯುವ ಕಾಂಗ್ರೆಸ್ ಘಟಕವು, ಭಾರತೀಯ ಜನತಾ ಪಕ್ಷದ ಮುಖಂಡ ಬಿ ಎಸ್ ಯಡಿಯೂರಪ್ಪನವರ ವಿರುದ್ಧ ದೂರು ಸಲ್ಲಿಸಿದ್ದು ಚಿಕ್ಕಮಗಳೂರಿನಿಂದ ವರದಿಯಾಗಿದೆ.
ಫೋನ್ ಕರೆ ವಿವಾದದಲ್ಲಿ ಇದು ಯಡಿಯೂರಪ್ಪನವರ ವಿರುದ್ಧ ಸಲ್ಲಿಸಲಾದ ಎರಡನೆಯ ದೂರು.
ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕೆಲ ದಿನಗಳ ಹಿಂದೆ ಯಡಿಯೂರಪ್ಪನವರ ಧ್ವನಿಯಿರುವ ಆಡಿಯೋ ಟೇಪೊಂದನ್ನು ಬಹಿರಂಗಗೊಳಿಸಿದರು. ಇದರಲ್ಲಿ ಯಡಿಯೂರಪ್ಪನವರು ಶರಣಗೌಡರಿಗೆ ಹಣದ ಆಮಿಷವೊಡ್ಡಿ ತಮ್ಮ ಪಕ್ಷಕ್ಕೆ ರಾಜೀನಾಮೆ ನೀಡಿ ಕಮಲ ಪಡೆಗೆ ಸೇರಲು ಆಮಂತ್ರಿಸುತ್ತಿದ್ದದ್ದು ಕೇಳಿಬಂದಿತು. ಮೊದಲಿಗೆ ಧ್ವನಿ ತಮ್ಮದು ಎಂಬ ವಿಚಾರ ತಳ್ಳಿಹಾಕಿದ್ದ ಯಡಿಯೂರಪ್ಪ, ನಂತರ ಧ್ವನಿ ತಮ್ಮದೆಂದು ಒಪ್ಪಿಕೊಂಡಿದ್ದಾರೆ.
ಈ ಹಿನ್ನೆಲೆಯಲ್ಲಿ, ಶರಣಗೌಡ ಅವರು ಭಾರತೀಜ ಜನತಾ ಪಕ್ಷದ ನಾಯಕರಾದ ಬಿ ಎಸ್ ಯಡಿಯೂರಪ್ಪ, ಪ್ರೀತಮ್ ಗೌಡ ಮತ್ತು ಮಾಜಿ ಪತ್ರಕರ್ತ ಮರಕಲ್ ವಿರುದ್ಧ ಬುಧವಾರದಂದು ಪೊಲೀಸ್ ದೂರು ಸಲ್ಲಿಸಿದ್ದರು. ಐಪಿಸಿ ಸೆಕ್ಷನ್ ೫೦೬ ಅಡಿ ಈ ದೂರನ್ನು ದೇವದುರ್ಗ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಯಿತು.
