ಬೆಂಕಿ ಬಂಡೀಪುರದಲ್ಲಷ್ಟೇ ಅಲ್ಲ, ಶಿವಮೊಗ್ಗ-ಚಿಕ್ಕಮಗಳೂರು ಜಿಲ್ಲೆಗಳಲ್ಲೂ ಸಾಕಷ್ಟು ಹಾನಿ ಮಾಡಿದೆ. ಸಾಗರ-ಶಿಕಾರಿಪುರ ಗಡಿಯಲ್ಲಿರುವ ದೊಡ್ಡಬ್ಯಾಣ, ಚೆನ್ನಾಪುರ, ಬೆಳಂದೂರು, ಕೊರ್ಲಿಕೊಪ್ಪಗಳಲ್ಲೂ ಕಾಡು ಸುಟ್ಟು ನಾಶವಾಗಿದೆ.
ಬೆಂಕಿಯ ಸರಣಿ ಹೀಗೆಯೇ ಮುಂದುವರೆಯಲಿದೆ. ಎಲ್ಲೂ ನೈಸರ್ಗಿಕವಾಗಿ ಬೆಂಕಿ ಹತ್ತಿಕೊಂಡಿಲ್ಲ. ಮನುಷ್ಯರೇ ಬೆಂಕಿ ಹಾಕಿದ್ದು.
ಶಿವಮೊಗ್ಗದ ಭದ್ರಾ ಅಭಯಾರಣ್ಯದಲ್ಲಿ ೪೦ ಎಕರೆ ಕಾಡು ನಾಶವಾಗಿದ್ದಕ್ಕೆ ಅಲ್ಲಿ ಕಾಯುವ ವಾಚರ್ರೇ ಕಾರಣ. ಸರಿಯಾಗಿ ಸಂಬಳ ಕೊಟ್ಟಿಲ್ಲವೆಂದು ಬೆಂಕಿ ಹಾಕಿದ್ದಾನೆ ಎಂದು ಹೇಳಲಾಗುತ್ತಿದೆ. ರೇಂಜರ್ ಏನು ಮಾಡುತ್ತಿದ್ದಾರೋ ಗೊತ್ತಿಲ್ಲ. ಇಲಾಖೆಯ ಸಿಬ್ಬಂದಿಗಳು ಏನೇ ತಪ್ಪು ಮಾಡಲಿ, ಮೇಲಿನವರು ರಕ್ಷಣೆ ಮಾಡುತ್ತಾರೆ.
ಬೆಂಕಿಗೆ ಇನ್ನೂ ಹಲವು ಆಯಾಮಗಳಿವೆ. ರಾಜಕೀಯ ನಾಯಕರು ತಮ್ಮ ಮಾತು ಕೇಳದ ಇಲಾಖೆಯ ಅಧಿಕಾರಿಗಳ ಮೇಲಿನ ಕೋಪಕ್ಕೆ ಜನರಿಗೆ ಬೆಂಕಿ ಹಾಕಿ ಎಂದು ಪ್ರಚೋದನೆ ನೀಡುತ್ತಾರೆ. ಇನ್ನು ಬಹುತೇಕ ಸಾಮಾನ್ಯರಿಗೆ ಬಂಡೀಪುರದಲ್ಲಿ ಕಾಡು ಸುಟ್ಟರೆ ನಮಗೇನು ಎನ್ನುವ ಮನಃಸ್ಥಿತಿಯಲ್ಲಿದ್ದಾರೆ. ನಾಗರಿಕ ಸಂವೇದನೆ ಸತ್ತೇ ಹೋಗಿದೆ. ಇಲಾಖೆಯ ಒಟ್ಟು ಸಿಬ್ಬಂದಿಗಳಲ್ಲಿ ೯೫% ಭ್ರಷ್ಟರಿದ್ದಾರೆ. ಕಾಡು ರಕ್ಷಣೆಯ ಹೆಸರಿನಲ್ಲೆ ಅವರು ಅನ್ನ ತಿನ್ನುತ್ತಾರೆ, ಅವರ ಮಕ್ಕಳು ಓದುತ್ತಾರೆ ಇತ್ಯಾದಿಗಳು. ಇವರಿಗೆ ಸಂಬಳವೇನೂ ಕಡಿಮೆ ಇರುವುದಿಲ್ಲ. ಆದರೂ ದುರಾಸೆ, ಅನ್ನ ನೀಡುವ ತಾಯಿಯನ್ನೇ ಮಾರುವ ಹಣದಾಸೆ.
ಇನ್ನು ಬೆಂಕಿ ಹಚ್ಚುವವರ ಮನಃಸ್ಥಿತಿ ಏನಿರಬಹುದು? ಬಹುಷ: ಕಾಡಿಗೆ ಬೆಂಕಿ ಹಚ್ಚುವ ಕೆಲಸದಷ್ಟು ಕೆಟ್ಟ ಮನ:ಸ್ಥಿತಿ ಹಿಟ್ಲರ್-ತೈಮೂರ್ ಮನಃಸ್ಥಿತಿಗಿಂತ ಹೀನ. ಭಯೋತ್ಪಾದರ ಹೀನ ಬುದ್ಧಿಗಿಂತ ಹೀನಾತಿಹೀನ. ಇದಕ್ಕಿಂತ ಹೆಚ್ಚೇನೂ ಹೇಳಲಾಗದು. ಕಾಡಿಗೆ ಬೆಂಕಿ ಹಾಕುವುದು ಮಾನವೀಯತೆಗೇ ಹಾಕುವ ಬೆಂಕಿ. ಕಾಡಿಗೆ ಬೆಂಕಿ ಹಾಕುವವರಿಗೆ ಅತ್ಯುಗ್ರ ಶಿಕ್ಷೆಯಾಗುವಂತೆ ಕಾನೂನು ರೂಪಿಸಬೇಕು. ಅಂತೂ ಹುಲಿ ಹಿಡಿದ ಮಾರನೇ ದಿನ ದನಗಾವಲು ಎನ್ನುವಂತೆ ಈಗ ನಾಲ್ಕು ಹೆಲಿಕಾಪ್ಟರ್ ಗಳು ಬೆಂಕಿ ನಂದಿಸುತ್ತಿವೆಯಂತೆ.
ಅತಿಥಿ ಲೇಖಕರು: ಅಖಿಲೇಶ ಚಿಪ್ಪಳಿ
