ಸಾಮಾನ್ಯವಾಗಿ ಭೂಕಂಪ ಸಂಭವಿಸಿದಾಗ ಪಕ್ಷಿಗಳು ಗದ್ದಲ ಮಾಡುತ್ತಾ ಹಾರುತ್ತವೆ. ದನಕರುಗಳು ಬೆಚ್ಚಿ ಎದ್ದು ಕುಣಿಯುತ್ತವೆ. ನಾಯಿಗಳು ಊಳಿಡುತ್ತವೆ. ಕಾಡುಪ್ರಾಣಿಗಳು ತಮ್ಮ ವಾಸಸ್ಥಾನದಿಂದ ಹೊರಗೋಡುತ್ತವೆ. ಜಿರಲೆಯಂಥ ಹಲವು ಚಿಕ್ಕ ಜೀವಿಗಳಿಗೂ ಭೂಕಂಪ ಸಂಭವಿಸುವ ಕೆಲ ನಿಮಿಷಗಳ ಮುಂಚೆಯೇ ಗ್ರಹಿಸಬಲ್ಲಷ್ಟು ಸೂಕ್ಷತೆ ಇದ್ದು ಅವು ನೆಲದಿಂದ ಹೊರಗೆ ಬರುತ್ತವೆ ಎಂಬುದನ್ನು ತಿಳಿದುಕೊಂಡಿದ್ದೇವೆ. ಅಂದರೆ ಇದು ಒಂದು ಪ್ರಾಕೃತಿಕ ವಿಕೋಪ, ಒಂದು ಅಸಹಜ ಬೆಳವಣಿಗೆ ಎಂಬ ಆತಂಕ ಪ್ರಾಣಿಗಳ ಆ ದುಗುಡಕ್ಕೆ ಕಾರಣ.
ಆದರೆ ಎಂದೂ ಬೇಸಿಗೆ, ಮಳೆ, ಗುಡುಗು ಸಿಡಿಲು, ಛಳಿಗಾಲದ ಪ್ರಾಕೃತಿಕ ಬದಲಾವಣೆಯನ್ನು ಪ್ರಾಣಿ ಪಕ್ಷಿಗಳು ಪ್ರತಿರೋಧಿಸಿದ್ದು ನಾನು ನೋಡಿಲ್ಲ. ಬಿರುಬಿಸಿಲಲ್ಲಿ ಅಲೆದಾಡುವ ನಾಯಿ ಗುಟುಕು ನೀರು ಕುಡಿದು ನೆರಳಲ್ಲಿ ಮೈಚೆಲ್ಲಿ ಆನಂದ ಪಡುತ್ತದೆ, ಎಮ್ಮೆಗಳು ಚಿಕ್ಕ ಕೆಸರಿನ ಹೊಂಡದಲ್ಲಿ ಈಜಾಡಿ ಖುಷಿ ಪಡುತ್ತವೆ. ಕೊರೆವ ಛಳಿಗಾಲದಲ್ಲಿ ಸಂಜೆಯ ಬಿಸಿ ಧೂಳಿನಲ್ಲಿ ಹಾವುಗಳು ನಲಿದಾಡಿದರೆ ಕಾಗೆ, ಗುಬ್ಬಚ್ಚಿಗಳು ಹೊಳೆ ದಡದ ಬಿಸಿ ಮರಳಲ್ಲಿ ಮಿಂದು ಕೇಕೆ ಹಾಕುತ್ತವೆ. ಹಗಲೂ ರಾತ್ರಿ ಸುರಿವ ಜಡಿಮಳೆಯಲ್ಲೂ ಅಲ್ಲಲ್ಲಿ ಮರದಡಿ ನಿಂತು ಮೇಯುವ ದನಗಳು ಹಸಿರ ಹೊದಿಕೆ ನೋಡಿ ರೋಮಾಂಚಿತಗೊಂಡರೆ, ಹಾವು, ಮೊಲ, ಮುಂಗುಸಿಯಂಥ ಬಿಲದಲ್ಲಿ ವಾಸಿಸುವ ಜೀವಿಗಳು ಗೂಡಿಗೆ ನೀರು ನುಗ್ಗಿದಾಗ ಜಾಗ ಬದಲಿಸಿ ಸುರಕ್ಷಿತ ಜಾಗಕ್ಕೆ ಹೋಗುತವೇ ಹೊರತು ಏನೋ ಪ್ರಕೃತಿ ವಿಕೋಪ ಆಗಿದೆ ಎಂಬಂತೆ ಪ್ರಕೃತಿಯ ವಿರುದ್ಧ ಪ್ರತಿರೋಧ ತೋರಲಾರವು.
ಛಳಿ, ಮಳೆ, ಸೆಖೆ, ಗುಡುಗು ಸಿಡಿಲು, ಬರ ಪ್ರವಾಹ ಇವೆಲ್ಲ ಸೇರಿಯೇ ಪ್ರಕೃತಿ ಎನ್ನುವುದು. ಲಕ್ಷಾಂತರ ವರ್ಷಗಳಿಂದ ಈ ಬದಲಾವಣೆಯ ಚಕ್ರ ತನ್ನ ವೇಗದ ಜತೆ ಸಮಯಕ್ಕೆ ತಕ್ಕಂತೆ ತಿರುಗುತ್ತಲೇ ಇರುತ್ತವೆ.
ಆದರೆ ಈ ಮೂರ್ಖ ಮಾನವನಿಗೆ ಏನಾಗಿದೆ? ತನ್ನ ಕೂದಲು ಕೊಂಕಿದರೂ ಅದು ಮಹಾನ್ ಪ್ರಳಯದ ಮುನ್ಸೂಚನೆ ಎಂಬಂತೆ ಬೊಬ್ಬೆ ಹೊಡೆಯುತ್ತಾನೆ. ಬೇಸಿಗೆಯಲ್ಲಿ ಏಸಿ ರೂಮಲ್ಲಿ ಕುಳಿತು “ದರಿದ್ರಲಕ್ಷಿಯಾದ ಪ್ರಕೃತಿ” ಎಂದು ಹಳಿಯುವವರು, ಛಳಿಗಾಲದಲ್ಲಿ “ಜನರನ್ನು ಕೊಲ್ಲುತ್ತಿರುವ ಛಳಿಯೆಂಬ ಮಾರಿ” ಎಂಬ ಘೋಷಣೆಗಳು, “ಬಿಕನಾಸಿ ಮಹಾಮಳೆ” ಎಂದು ಮಳೆಗಾಲದಲ್ಲಿ ತಮ್ಮ ನೀಚನಾಲಗೆಯನ್ನು ಹರಿಬಿಡುವ ಟಿವಿ ಚಾನಲ್ ಗಳನ್ನು ನೋಡಿದಾಗ ಈ ಪ್ರಕೃತಿ ಎನ್ನುವುದು ಮಾನವನ ಅಣತಿಯಂತೆ ನಡೆಯಬೇಕಾ ಎಂಬ ಪ್ರಶ್ನೆ ಮೂಡುತ್ತದೆ. ಮನುಷ್ಯನಿಗೆ ನೀನೇ ಭೂಮಿಗೆ ಸುಪ್ರೀಂ ಅಂತ ಸರ್ಟಿಫಿಕೇಟ್ ಕೊಟ್ಟವರು ಯಾರು? ಇಡೀ ಭೂಮಿ ಯಾವಾಗಲೂ ಏರ್ ಕಂಡೀಶನ್ಡ್ ರೂಂ ನಂತಿರಬೇಕು ಎಂಬ ಮೂರ್ಖ ಮನಸ್ಥಿತಿ ಹಾಗೂ ತಾನು ಎಂದಿಗೂ ಕಂಫರ್ಟ್ ಝೋನ್ ನಲ್ಲೇ ಇರಬೇಕು ಎಂಬ ಅಹಂಕಾರ ಹೊಂದಿರುವ ನಾವು ಮಾನವರು ಪ್ರಕೃತಿಯ ಎದುರು ಒಂದು ಕ್ರಿಮಿಗೆ ಸಮ.
ಮೂಲ: ಪಶ್ಚಿಮ ಘಟ್ಟ ಜಾಗೃತಿ ವೇದಿಕೆ
