ಶಾಂಘೈ ಕನ್ನಡಿಗರ ಬಳಗವು ಇದೇ ನವೆಂಬರ್ ೦೩ ರಂದು ಅದ್ಧೂರಿಯಾಗಿ ಕನ್ನಡ
ರಾಜ್ಯೋತ್ಸವ ಮತ್ತು ದೀಪಾವಳಿಯನ್ನು ಸಂಭ್ರಮದಿಂದ ಆಚರಿಸಿದರು.
ಶಾಂಘೈ ಪುಡೊಂಗ್ ಜಿಲ್ಲೆಯ ಯಾನ್ಲಾರ್ಡ್ ಟೌನನ್ ಕಮ್ಯೂನಿಟಿ ಹಾಲ್ ನಲ್ಲಿ ೨೦೧೯
ನೇ ಸಾಲಿನ ಕನ್ನಡ ರಾಜ್ಯೋತ್ಸವ ಮತ್ತು ದೀಪಾವಳಿ ಸಂಭ್ರಮಾಚರಣೆ ಅದ್ಧೂರಿಯಾಗಿ
ನಡೆಯಿತು. ಇದು ಶಾಂಘೈಯಲ್ಲಿ ಆಚರಿಸಿದ ೨ನೇ ಕನ್ನಡ ರಾಜ್ಯೋತ್ಸವ ಮತ್ತು ದೀಪಾವಳಿ
ಸಂಭ್ರಮವಾಗಿತ್ತು. ಈ ಕನ್ನಡ ಉತ್ಸವದಲ್ಲಿ ಸುಮಾರು ೧೩೦ ಕನ್ನಡಿಗರು ಶಾಂಘೈ ಮತ್ತು
ಹತ್ತಿರದ ನಗರಗಳಿಂದ ಬಂದು ಸೇರಿದ್ದರು. ಮುಖ್ಯ ಅತಿಥಿಗಳಾಗಿ ಶಾಂಘೈನ ಭಾರತೀಯ
ವಾಣಿಜ್ಯ ದೂತಾವಾಸದ ಮುಖ್ಯಸ್ಥ ಶ್ರೀ ಅನಿಲ್ ಕುಮಾರ್ ರಾಯ್ ಮತ್ತು ಅವರ
ಪತ್ನಿಯನ್ನು ಹಾಗು ಮತ್ತೋರ್ವ ಮುಖ್ಯ ಅತಿಥಿಯಾಗಿ ಕನ್ನಡಿಗರಾದ ಶ್ರೀಮತಿ ಮತ್ತು ಶ್ರೀ.
ಕೆ ವಿ ಕಾಮತ (ನ್ಯೂ ಡೆವಲಪ್ಮೆಂಟ್ ಬ್ಯಾಂಕ್ ಅಧ್ಯಕ್ಷ) ರನ್ನು ಆಮಂತ್ರಿಸಿ ಮೈಸೂರು ಪೇಟ
ತೊಡಿಸಿ, ಹಾರ ಮತ್ತು ರೇಷ್ಮೆ ಶಾಲ್ ಹೊದಿಸಿ ನಾಡಿನ ಸಂಸ್ಕೃತಿಯಂತೆ ಆದರಿಸಲಾಯಿತು.
ಶಾಂಘೈ ಕನ್ನಡಿಗರ ಧ್ಯೇಯವಾದ ನಾಡು-ನುಡಿ-ನಡೆ ಯನ್ನು ಸ್ವಾಗತ ಭಾಷಣದಲ್ಲಿ
ಮೆಲಕುಹಾಕಿ ಕರ್ನಾಟಕವನ್ನು ಪ್ರತಿನಿಧಿಸೋಣ, ಕನ್ನಡವನ್ನು ಮಾತಾಡೋಣ ಮತ್ತು
ಕನ್ನಡತನವನ್ನು ಬೆಳೆಸೋಣ ಎಂದು ಕರೆಕೂಗಿ ಸಂದೀಪಶಾಸ್ತ್ರೀ, ಮುಖ್ಯ ಅತಿಥಿಗಳನ್ನು
ಮತ್ತು ಸಭಿಕರನ್ನು ಕಾರ್ಯಕ್ರಮಕ್ಕೆ ಸ್ವಾಗತಿಸಿದರು.
ಭಾರತೀಯ ವಾಣಿಜ್ಯ ದೂತಾವಾಸದ ಮುಖ್ಯಸ್ಥ ಶ್ರೀ ಅನಿಲ್ ಕುಮಾರ್ ರಾಯ್ ತಮ್ಮ
ಕಿರು ಭಾಷಣದಲ್ಲಿ ಭಾರತೀಯ ವೈವಿಧ್ಯತೆಯಲ್ಲಿ ಕರ್ನಾಟಕದ ಪಾತ್ರವನ್ನು ಹೊಗಳಿದರು.
ಪ್ರತಿ ರಾಜ್ಯದ ತಾಯ್ನುಡಿಯು ತನ್ನದೇ ಆದ ಪ್ರಾಮುಖ್ಯತೆ ಪಡೆದಿದೆ ಮತ್ತು ಭಾರತೀಯರ
ವೈವಿಧ್ಯತೆಯಲ್ಲೂ ಏಕತೆಯನ್ನು ತೋರ್ಪಡಿಸುವಲ್ಲಿ ಮುಖ್ಯ ಬಿಂದುವಾಗಿದೆ ಎಂದು
ಸ್ಮರಿಸಿದರು. ಅದಲ್ಲದೇ ಕರ್ನಾಟಕದ ಮಹಾನ್ ವ್ಯಕ್ತಿಗಳಾದ ಫೀಲ್ಡ್ ಮಾರ್ಷಲ್ ಕೆ ಎಮ್
ಕಾರ್ಯಪ್ಪ, ಸಿ ವಿ ರಾಮನ್, ಪಂಡಿತ್ ಭೀಮಸೇನ ಜೋಷಿ ಮತ್ತಿತರರು ಭಾರತಕ್ಕೆ ಮತ್ತು
ಪ್ರಪಂಚಕ್ಕೆ ನೀಡಿದ ಅಪಾರ ಕೊಡುಗೆಯನ್ನು ಸ್ಮರಿಸಿ, ರಾಷ್ಟ್ರಕ್ಕೆ ನೀಡಿದ ಕನ್ನಡ ನಾಡಿನ
ಮಹತ್ತರ ಕೊಡುಗೆಗಳಿಗೆ ಅಭಿನಂದಿಸಿದರು. ಕನ್ನಡ ರಾಜ್ಯೋತ್ಸವ ಶಾಂಘೈ ನಲ್ಲಿ
ಆಚರಿಸುತ್ತಿರುವ ಕನ್ನಡ ಬಳಗವನ್ನು ಪ್ರಶಂಸಿಸಿದರು ಮತ್ತು ಇದೇ ರೀತಿಯ ಸಾಂಸ್ಕೃತಿಕ
ಕಾರ್ಯಕ್ರಮಗಳನ್ನು ನಡೆಸಿ ಮಕ್ಕಳಲ್ಲಿ ಭಾರತೀಯ ಕಲೆಗಳನ್ನು ನೆಲೆಸುವಂತೆ
ಮಾಡಬೇಕೆಂದು ಕಾರ್ಯಕ್ರಮದ ಸಂಘಟಕರಿಗೆ ಕರೆಕೊಟ್ಟು ತಮ್ಮ ಸಹಾಯಹಸ್ತವನ್ನು
ಚಾಚಿದರು.
ಮತ್ತೊಬ್ಬ ಮುಖ್ಯ ಅತಿಥಿ ಶ್ರೀ ಕೆ ವಿ ಕಾಮತರವರು ಕನ್ನಡದಲ್ಲಿ ಸಭಿಕರನ್ನುದ್ದೇಶಿಸಿ
ರಾಜ್ಯೋತ್ಸವದ ಶುಭಾಶಯಗಳನ್ನು ಕೋರಿದರು. ಶಾಂಘೈನಲ್ಲಿ ಕನ್ನಡರಾಜ್ಯೋತ್ಸವ
ಆಚರಿಸಿದ್ದು ಮತ್ತು ಶಾಂಘೈ ಕನ್ನಡಿಗರ ಬಳಗ ಬೆಳದದ್ದು ಸಂತೋಷದ ವಿಷಯ, ಮುಂದಿನ
ವರ್ಷ ಇನ್ನೂ ಹೆಚ್ಚಾಗಿ ಕನ್ನಡಿಗರನ್ನು ಸೇರಿಸಿ ಸಂಭ್ರಮದಿಂದ ರಾಜ್ಯೋತ್ಸವವನ್ನು
ಆಚರಿಸುವಂತಾಗಲಿ ಎಂದು ಹರಸಿದರು. ಕನ್ನಡಿಗ ದಿಗ್ಗರಜನ್ನು ನೆನೆಯುತ್ತಾ ಭಾರತದ ಐಟಿ
ಕ್ರಾಂತಿಯ ಹರಿಕಾರರಾದ ಶ್ರೀ ಎನ್ ಆರ್ ನಾರಾಯಣಮೂರ್ತಿಯವರ ಜೊತೆಗಿನ ತಮ್ಮ
ಹತ್ತಿರದ ಸಂಪರ್ಕವನ್ನು ಸ್ಮರಿಸಿ ಅವರ ಸರಳತನ ಮತ್ತು ವಿನಮ್ರತೆ ತುಂಬಾ ವಿರಳವಾದದ್ದು
ಹಾಗೆಯೇ ಅವರು ಇನ್ಫೋಸಿಸ್ ನಲ್ಲಿ ಮಾಡಿದ ಸಾಧನೆ ಅಗ್ರಣೀಯ ಮತ್ತು ಅನುಕರಣೀಯ
ಎಂದರು. ಕಾರ್ಯಕ್ರಮದಲ್ಲಿರುವ ಕನ್ನಡಿಗರಿಗೆ ನೀವೆಲ್ಲಾ ನಿಮ್ಮ ನಿಮ್ಮ ಕ್ಷೇತ್ರಗಳಲ್ಲಿ
ಮುಂದೆ ಬಂದು ಕನ್ನಡದ ಬಾವುಟವನ್ನು ಹಾರಿಸುವಂತಾಗಲಿ ಎಂದು ಶುಭಾಶಯ
ಕೋರಿದರು.
ಈ ಕಾರ್ಯಕ್ರಮದಲ್ಲಿ ಒಂದು ಅವಿಸ್ಮರಣೀಯ ಅಭಿನಂದನಾ ಆಚರಣೆ ನಡೆಯಿತು ಅದರಲ್ಲಿ
ಶ್ರೀ ಕಿರಣ ಜಾಂಭೇಕರ್ ರವರಿಗೆ “ಅಸಾಮಾನ್ಯ ಕನ್ನಡಿಗ” ಮತ್ತು ಶ್ರೀಮತಿ ಪ್ರತಿಮಾ
ಕಿರಣರವರಿಗೆ “ಅಸಾಮಾನ್ಯ ಕನ್ನಡತಿ” ಎಂಬ ಗೌರವ ಪ್ರಶಸ್ತಿಯನ್ನು ಮುಖ್ಯ ಅತಿಥಿಗಳಾದ
ಶ್ರೀ ಅನಿಲ್ ರಾಯ್ ಮತ್ತು ಶ್ರೀ ಕೆ ವಿ ಕಾಮತ ದಂಪತಿಗಳಿಂದ ನೀಡಲಾಯಿತು. ಶಾಂಘೈ
ಕನ್ನಡಿಗರ ಬಳಗದ ಕಾರಣೀಭೂತರಾದ ಶ್ರೀಮತಿ ಪ್ರತಿಮಾ ಮತ್ತು ಶ್ರೀ ಕಿರಣ್ ದಂಪತಿಗಳು
೨೦೦೮ ರಿಂದ ಶಾಂಘೈದಲ್ಲಿ ವಾಸಿಸುತ್ತಿದ್ದು ಶಾಂಘೈ ನಲ್ಲಿ ಕನ್ನಡತನ ಕನ್ನಡಿಗರಲ್ಲಿ
ಬೆಳೆಯಲು ತಮ್ಮ ಅಸಾಮಾನ್ಯ ಕೊಡುಗೆಯನ್ನು ನೀಡಿದ್ದಾರೆ.
ಕನ್ನಡರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಶಾಂಘೈ ಕನ್ನಡಿಗರೇ ಪ್ರಸ್ತುತ ಪಡಿಸಿದ ಅನೇಕ
ವಿಧದ ಮನೋರಂಜನೆಗಳಿದ್ದವು ಅದರಲ್ಲಿ ಕೆಲವು ವೀಕ್ಷಕರನ್ನು ತುಂಬಾ ಮನಸೂರೆ
ಗೊಳಿಸಿದವು, ಮೋಹಿನಿ ಮತ್ತು ರೀನಾರಿಂದ ಮೂಡಿಬಂದ ಯಕ್ಷಗಾನ medley, ಪ್ರೊ
ಮುರುಗೇಶ ಬಾಬು ರವರ ಸುಮಧುರ ರಸಮಂಜರಿ, ಜಯಸಿಂಹರವರು ಪ್ರಸ್ತುತ ಪಡಿಸಿದ ಟಿ
ಪಿ ಕೈಲಾಸಂ ರವರ ಹಾಸ್ಯ ಪ್ರದರ್ಶನ ಹಾಗು ಗೃಹಿಣಿಯರ ಅಮೋಘ ನೃತ್ಯ ಪ್ರದರ್ಶನ,
ಮತ್ತೂ ಹಲವು.
ಕಾರ್ಯಕ್ರಮದ ಕೊನೆಯಲ್ಲಿ ಕಿರಣ್ ಜಾಂಭೇಕರ್ ಮುಕ್ತಾಯ ಭಾಷಣ ಮಾಡುತ್ತ ಎಲ್ಲ
ಸ್ಪರ್ಧಿಗಳನ್ನು ಅಭಿನಂದಿಸಿ, ಪ್ರೇಕ್ಷಕರಿಗೆ, ಮುಖ್ಯ ಅತಿಥಿಗಳಿಗೆ ಮತ್ತು ಕಾರ್ಯಕರ್ತರಿಗೆ
ಧನ್ಯವಾದಗಳನ್ನು ಅರ್ಪಿಸಿದರು. ಶ್ರೀಮತಿ ವಾಣಿ ಭರತ್, ಜಯಸಿಂಹ ಮತ್ತು
ಮಲ್ಲಿಕಾರ್ಜುನ ಕಾರ್ಯಕ್ರಮದ ನಿರೂಪಣೆ ಮಾಡಿದರು. ಕಿರಣ್ ಭೂಸನೂರುಮಠ
ಸಿದ್ಧಪಡಿಸಿದ LED ಪರದೆಯ ಮೇಲಿನ ಆಕರ್ಷಕ ಹಿನ್ನೆಲೆ ಚಿತ್ರಗಳು ಪ್ರತಿ ಪ್ರದರ್ಶನದ
ಅಂದವನ್ನು ಹೆಚ್ಚಿಸಿ ಪ್ರೇಕ್ಷಕರ ಮನಸೂರೆ ಗೊಳಿಸಿದವು. ಪ್ರಾಯೋಜಕರಾದ Blue
Fabrics, Amber Home interiors, Tiraa Jewelers, Khan Chacha
ಮತ್ತು Smart Arts for Kids ಕಾರ್ಯಕ್ರಮವನ್ನುತಮ್ಮ ಉದಾರ ಹಸ್ತದಿಂದ
ಪ್ರೋತ್ಸಾಹಿಸಿದ್ದಾರೆ.
Author : Sandeepshastri Kashikar on behalf of Shanghai Kannadigaru
RELATED ITEMS: KANNADA, KANNADIGA, CHINA, SHANGHAI,
SHANGHAIKANNADIGARU