ತೀರ್ಥಹಳ್ಳಿ ವಲಯ ಅರಣ್ಯಾಧಿಕಾರಿಗಳ ಸರ್ವಶ್ರೇಷ್ಠ ಸಾಧನೆ ಏನು?
– ಸಾವಿರಾರು ಲಾರಿ ಲೋಡ್ ಮಣ್ಣು ಸಾಗಿಸಿದ ನಂತರ ಪ್ರಕರಣ ದಾಖಲು ಮಾಡಿಕೊಳ್ಳುವುದು!
ತೀರ್ಥಹಳ್ಳಿ: ಇಂದು ಮಲೆನಾಡಿನ ಅರಣ್ಯನಾಶಕ್ಕೆ ಅರಣ್ಯಾಧಿಕಾರಿಗಳೇ ನೇರವಾಗಿ ಕಾರಣವಾಗಿದ್ದಾರೆ. ಇಂದಿಗೂ ಅರಣ್ಯ ಭೂಮಿ ಕಬಳಿಕೆಯಾಗುತ್ತಿದೆ. ಬಡಬಗ್ಗರಿಗೆ, ವಿಧವೆಯರಿಗೆ, ಸಣ್ಣ-ಪುಟ್ಟ ರೈತರಿಗೆ ಕೇಸ್ ಹಾಕುವ ಈ ಅಧಿಕಾರಿಗಳು ಶ್ರೀಮಂತರ, ಶ್ರೀಮಂತರ ರೈತರ ಅಕ್ರಮ ಭೂ ಕಬಳಿಕೆಗೆ ರಕ್ಷಣೆ ನೀಡುತ್ತಲೇ ಇದ್ದಾರೆ.
ತೀರ್ಥಹಳ್ಳಿ ವಲಯ ಅರಣ್ಯಾಧಿಕಾರಿಗಳ ಕಛೇರಿಯಿಂದ ಕೇವಲ ೩-೪ ಕಿಲೋಮೀಟರ್ ದೂರದಲ್ಲಿರುವ ಶಿವಮೊಗ್ಗ-ತೀರ್ಥಹಳ್ಳಿ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಭಾರತೀಪುರ ಸರ್ವೆ ನಂ.೮೧ರ ಅರಣ್ಯ ಭೂಮಿಯಿದೆ. ಈ ಭೂಮಿ ರಸ್ತೆ ಪಕ್ಕದಲ್ಲೇ ಇದ್ದು ಪ್ರತಿನಿತ್ಯ ಅರಣ್ಯ ಅಧಿಕಾರಿಗಳು ಇಲ್ಲೇ ತಿರುಗಾಡುತ್ತಿರುತ್ತಾರೆ. ಈ ಅರಣ್ಯ ಭೂಮಿಯ ೨ ಎಕರೆಯಲ್ಲಿ ಬೆಳೆದ ಮರ-ಗಿಡಗಳನ್ನು ಕಡಿದು ನಾಶ ಮಾಡಿ ಸುಮಾರು ೬೦-೭೦ ಅಡಿ ಎತ್ತರದ ಗುಡ್ಡವನ್ನು ಜೆಸಿಬಿ, ಹಿಟಾಚಿ ಯಂತ್ರಗಳಿಂದ ಸಾವಿರಾರು ಲಾರಿ ಲೋಡ್ ಅಂದಾಜು ೨೫-೩೦ ಸಾವಿರ ಲಾರಿ ಲೋಡ್ (ಅಂದಾಜು ಬೆಲೆ ೪-೫ ಕೋಟಿ ಬೆಲೆಬಾಳುವ) ಮಣ್ಣು ತೆಗೆದು ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಮಣ್ಣನ್ನು ತುಂಗಾ ಕಾಲೇಜು ಸಮೀಪ ಗದ್ದೆಗಳಿಗೆ ಲೇಔಟ್ ನಿವೇಶನಗಳನ್ನು ಮಾಡಲು ಭೂಮಿಗೆ ತುಂಬಿದ್ದಾರೆ.
ಗ್ರಾಮಸ್ಥರು ಆಗ್ಗೆ ಅಂದು ತೀರ್ಥಹಳ್ಳಿ ವಲಯ ಅರಣ್ಯಾಧಿಕಾರಿ ಶಿವಮೂರ್ತಿ ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೇಶವರವರಿಗೆ ಲಿಖಿತವಾಗಿ ದೂರುಗಳನ್ನು ದಾಖಲು ಮಾಡಿದ್ದಾರೆ. ಒತ್ತಡ, ಪ್ರಭಾವ, ಲಂಚಕ್ಕೆ ಶಾಮೀಲಾದ ಅಧಿಕಾರಿಗಳು ಯಾವುದೇ ಕ್ರಮ ಜರುಗಿಸದೇ ಸುಮ್ಮನಿದ್ದು, ಈಗ್ಗೆ ಪುನಃ ಮಣ್ಣು ತೆಗೆದು ಸಾಗಿಸಲು ಮುಂದಾದಾಗ ಸ್ಥಳೀಯರು ದೂರು ನೀಡಿದ ತಕ್ಷಣ ವಲಯ ಅರಣ್ಯಾಧಿಕಾರಿಗಳು ಸಣ್ಣದೊಂದು ಕೇಸ್ ಹಾಕಿ ಲೈಸನ್ಸ್ ನೀಡಿದಂತೆ ಆಗಿದೆ.
ಏನೇ ಇರಲಿ, ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಅರಣ್ಯ ಇಲಾಖೆ ಕಛೇರಿಯ ಹತ್ತಿರ ಇಂತಹದೊಂದು ದೊಡ್ಡ ಅಕ್ರಮ ನಡೆದಿದೆ. ಸಾರ್ವಜನಿಕರು ಈಗಾಗಲೇ ಪ್ರಧಾನ ಮತ್ತು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಅರಣ್ಯ ಪಡೆಯವರಿಗೆ ದೂರು ದಾಖಲು ಮಾಡಿದ್ದು, ಎಸಿಬಿ ಮತ್ತು ಲೋಕಾಯುಕ್ತ ನ್ಯಾಯಾಲಯಕ್ಕೆ ದೂರು ಸಲ್ಲಿಸಲು ಸ್ಥಳೀಯರೊಬ್ಬರು ಮುಂದಾಗಲಿದ್ದಾರೆ. ಅಧಿಕಾರಿಗಳ ಮೇಲೆ ಶಿಸ್ತುಕ್ರಮ ಜರುಗಿಸಿ, ಸಂಬಂಧಪಟ್ಟ ಅರಣ್ಯಾಧಿಕಾರಿಗಳನ್ನು ಅಮಾನತ್ತಿನಲ್ಲಿಟ್ಟು, ವಿಚಾರಣೆಗೆ ಗುರಿಪಡಿಸಲಿದ್ದಾರೆಯೋ ಎಂದು ಕಾದು ನೋಡಲು ಗ್ರಾಮಸ್ಥರು ಮುಂದಾಗಿದ್ದಾರೆ. ಎಸಿಬಿ ಹಾಗೂ ಲೋಕಾಯುಕ್ತಕ್ಕೂ ದೂರು ದಾಖಲು ಮಾಡಲು ಗ್ರಾಮಸ್ಥರು ಮುಂದಾಗಿದ್ದಾರೆಂದು ತಿಳಿದು ಬಂದಿದೆ.
ಅತಿಥಿ ಲೇಖಕರು: ಲಿಯೋ ಅರೋಜ
ತೀರ್ಥಹಳ್ಳಿ ನ್ಯೂಸ್ ಸ್ಟುಡಿಯೋ
ವಾಟ್ಸಾಪ್: ೯೪೪೮೧೩೭೪೭೩, ೯೮೮೦೧೨೩೦೪೦
