“ಪ್ರಜಾಪ್ರಭುತ್ವ ಜೀವಂತವಾಗಿದ್ದು ನಲಿದಾಡುತ್ತಿರುವ ದೆಹಲಿಗೆ ಸುಸ್ವಾಗತ ದೀದಿ” ಎನ್ನುವ ಹಲವು ಭಿತ್ತಿಪತ್ರಗಳು ದೇಶದ ರಾಜಧಾನಿ ಹೊಸದೆಹಲಿಯ ಕೇಂದ್ರ ಭಾಗದಲ್ಲಿ ತಲೆಯೆತ್ತಿವೆ.
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇಂದು ದೆಹಲಿಗೆ ಆಗಮಿಸಲಿದ್ದಾರೆ. ಮಮತಾ ಹೊಸದೆಹಲಿಯ ಜಂತರ್ ಮಂತರ್ನಲ್ಲಿ ನಡೆಯಲಿರುವ ವಿರೋಧ ಪಕ್ಷಗಳ ರ್ಯಾಲಿಯಲ್ಲಿ ಪಾಲ್ಗೊಳ್ಳಲಿದ್ದಾರೆ.
Youth For Democracy ಎಂಬ ಸಂಘಟನೆಯು ಈ ಭಿತ್ತಿಪತ್ರಗಳನ್ನು ಹೊಸದೆಹಲಿಯ ಪ್ರಮುಖ ಸ್ಥಳಗಳಲ್ಲಿ ಸ್ಥಾಪಿಸಿದೆ. ಈ ಭಿತ್ತಿಪತ್ರಗಳಲ್ಲಿ ಮಮತಾ ಅವರ ವಿವಿಧ ಹಾವ-ಭಾವಗಳುಳ್ಳ ವ್ಯಂಗ್ಯಚಿತ್ರಗಳು ಎದ್ದುಕಾಣುತ್ತಿವೆ. ಒಟ್ಟಾರೆ, ತಮ್ಮ ರಾಜ್ಯ ಪಶ್ಚಿಮ ಬಂಗಾಳದಲ್ಲಿ ಇತ್ತೀಚೆ ನಡೆದ ರಾಜಕೀಯ ಪ್ರಹಸನಗಳ ಬಗ್ಗೆ ಈ ಭಿತ್ತಿಪತ್ರಗಳು “ದೀದಿ”ಯವರನ್ನು ಲೇವಡಿ ಮಾಡುವಂತಿವೆ. ಈ ಭಿತ್ತಿಪತ್ರಗಳು ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲಿವೆ.
ಜಂತರ್ ಮಂತರ್ ರಸ್ತೆ, ಬಾಂಗ್ ಭವನ್ ಮತ್ತು ವಿಂಡ್ಸರ್ ಅರಮನೆ ವಲಯದಲ್ಲಿ ಈ ಭಿತ್ತಿಪತ್ರಗಳನ್ನು ಸ್ಥಾಪಿಸಲಾಗಿದೆ. “ದೀದಿ, ನೀವು ಇಲ್ಲಿನ ಜನತೆಯನ್ನು ಉದ್ದೇಶಿಸಿ ಭಾಷಣ ಮಾಡುವುದನ್ನು ಯಾರೂ ತಡೆಯವುದಿಲ್ಲ” ಎಂದು ಇನ್ನೊಂದು ಭಿತ್ತಿಪತ್ರವು ಸಾರುತ್ತದೆ. ಮತ್ತೊಂದು, “ದೀದಿ, ದಯೆಯಿಟ್ಟು ದಾದಾಗಿರಿಯನ್ನು ಇಲ್ಲಿ ತರಬೇಡಿ” ಎಂದು ವಿನಂತಿಸುತ್ತದೆ. ಮಗುದೊಂದು, “ದೀದಿ, ಭಾರತ ಗಣರಾಜ್ಯಕ್ಕೆ ಆತ್ಮೀಯ ಸುಸ್ವಾಗತ!” ಎನ್ನುತ್ತದೆ.
ಮಮತಾ ಬ್ಯಾನರ್ಜಿ ಜೊತೆ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸಹ ವಿರೋಧ ಪಕ್ಷಗಳ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಚಿತ್ರ ಕೃಪೆ: Pictures Courtesy: Youth for Democracy, Zee News, India Today, News18.com, ANI
