ಬೆಂಗಳೂರು ಬಿಟ್ಟರೆ ಶಿವಮೊಗ್ಗದಲ್ಲೇ ಹೆಚ್ಚು ಅಪರಾಧ ಚಟುವಟಿಕೆಗಳು ನಡೆಯುತ್ತಿವೆ!
“ಎರಡು ವರ್ಷಗಳ ಅವಧಿಯಲ್ಲಿ ೧೦ ಕೋಟಿ ರೂಪಾಯಿ ಮೌಲ್ಯದ ೭,೨೭೬ ಲೋಡ್ ಮರಳನ್ನು ವಶಪಡಿಸಿಕೊಂಡಿದ್ದೇವೆ. ಅಕ್ರಮ ಮರಳು ಸಾಗಣೆ ಅರೋಪದ ಮೇಲೆ ೫೩೫ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದೇವೆ, ೪೯೪ ವಾಹನಗಳನ್ನು ವಶಪಡಿಸಿಕೊಂಡಿದ್ದೇವೆ. ೬೦೫ ಆರೋಪಿಗಳ ವಿರುದ್ಧ ಕ್ರಮ ಕೈಗೊಂಡಿದ್ದೇವೆ. ಈ ವರ್ಷ ಜನವರಿ ತಿಂಗಳಲ್ಲೇ ೧೧.೫೪ ಕೋಟಿ ರೂಪಾಯಿ ಮೌಲ್ಯದ ೩೦೫ ಲೋಡ್ ಮರಳನ್ನು ವಶಕ್ಕೆ ತೆಗೆದುಕೊಂಡಿದ್ದೇವೆ” ಎಂದು ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನವ್ ಅಶೋಕ್ ಖರೆ ಮಾಹಿತಿ ನೀಡಿದರು.
ಅಕ್ರಮ ಮರಳು ಸಾಗಣೆಯಲ್ಲಿ ರೌಡಿಗಳು ಭಾಗಿಯಾಗಿದ್ದಾರೆ, ಮರಳು ಮಾಫಿಯಾ ವಿರುದ್ಧ ಕ್ರಮ ಕೈಗೊಂಡಲ್ಲಿ ಪೊಲೀಸರ ವಿರುದ್ಧವೇ ಅಪಪ್ರಚಾರ ನಡೆಸುತ್ತಿದ್ದಾರೆ ಎಂದು ಈ ಹಿರಿಯ ಪೊಲೀಸ್ ಅಧಿಕಾರಿ ಬೇಸರ ವ್ಯಕ್ತಪಡಿಸಿದರು.
ಎರಡು ವರ್ಷಗಳ ಅವಧಿಯಲ್ಲಿ ಮಟ್ಕಾ ಜೂಜಾಟ, ಒಸಿ ಬರೆಯುವುದು, ರೌಡಿಸಂ ಸೇರಿದಂತೆ ನಾನಾ ರೀತಿಯ ಅಪರಾಧ ಪ್ರಕರಣಗಳನ್ನು ಭೇದಿಸಲು ಮತ್ತು ನಿಯಂತ್ರಿಸಲು ಶಿವಮೊಗ್ಗ ಪೊಲೀಸರು ಕಡಿಮೆ ಸಿಬ್ಬಂದಿ ಹಾಗೂ ರಾಜಕೀಯ ಹಿತಾಸಕ್ತಿಗಳಂತಹ ಸಮಸ್ಯೆಗಳನ್ನು ಲೆಕ್ಕಿಸದೆ ಹಗಲಿರುಳು ಶ್ರಮಪಡುತ್ತಿದ್ದಾರೆ ಎಂದು ಖರೆ ಅವರು ಹೇಳಿದರು.
ಸಿಬಿನ್ ಪನಯಿಲ್ ಸೊಮನ್
ಇಂಡ್ ಸಮಾಚಾರ್, ಸಾಗರ
