“ನಡೆದಾಡುವ ದೇವರು” ಎಂದು ವಿಶ್ವದಾದ್ಯಂತ ಗೌರವ ಗಳಿಸಿದ್ದ ತುಮಕೂರಿನ ಸಿದ್ಧಗಂಗಾ ಮಠದ ಸ್ವಾಮಿಗಳು ಅಪಾರವಾದ ಧಾರ್ಮಿಕ ಮತ್ತು ಸಮಾಜ ಸೇವೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದರು.
ಶಿವಕುಮಾರ ಸ್ವಾಮಿಗಳು ಅಂದಿನ ಬೆಂಗಳೂರು — ಇಂದಿನ ರಾಮನಗರ — ಜಿಲ್ಲೆಯ ಮಾಗಡಿ ತಾಲೂಕಿನ ವೀರಾಪುರದಲ್ಲಿ ೧೦೯೭ರ ಏಪ್ರಿಲ್ ೧ರಂದು ಜನಿಸಿದರು. ಇವರ ತಂದೆ-ತಾಯಿಯರಿಗೆ ಒಟ್ಟು ಹದಿಮೂರು ಮಂದಿ ಮಕ್ಕಳು.
ಶಿವಕುಮಾರ ಸ್ವಾಮಿಗಳು ತಮ್ಮ ಪ್ರಾಥಮಿಕ ಶಿಕ್ಷಣವನ್ನು ವೀರಾಪುರ ಮತ್ತು ನಾಗವಲ್ಲಿಯ ಶಾಲೆಗಳಲ್ಲಿ ಪೂರೈಸಿದರು. ಪ್ರೌಢ ಶಿಕ್ಷಣಣವನ್ನು ತುಮಕೂರಿನ ಸರ್ಕಾರಿ ಪ್ರೌಢ ಶಾಲೆಯಲ್ಲಿ ಪೂರೈಸಿ, ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪದವಿ ಶಿಕ್ಷಣ ಪೂರೈಸಿದರು. ಸ್ವಾಮಿಗಳು ಕನ್ನಡ, ಸಂಸ್ಕೃತ ಮತ್ತು ಇಂಗ್ಲಿಷ್ ಭಾಷೆಗಳನ್ನು ಚೆನ್ನಾಗಿ ಬಲ್ಲವರಾಗಿದ್ದರು.
ಶಿವಕುಮಾರ ಸ್ವಾಮಿಗಳು ೧೯೩೦ರಲ್ಲಿ ವಿರಕ್ತಾಶ್ರಮ ಸೇರಿದರು. ಹಲವು ದಶಕಗಳ ಕಾಲ ಸಿದ್ಧಗಂಗಾ ಮಠ ಮತ್ತು ಅದರ ಸ್ವಾಮ್ಯದಲ್ಲಿರುವ ಸಂಸ್ಥೆಗಳನ್ನು ಅತ್ಯಂತ ಸಮರ್ಪಕವಾಗಿ ಮುನ್ನಡೆಸಿದರು.
ಭಾರತದಲ್ಲಿ ಬಹಳಷ್ಟು ಗೌರವ ಗಳಿಸಿದ ಅಧ್ಯಾತ್ಮಿಕ ಗಣ್ಯ್ರರಲ್ಲಿ ಶ್ರೀಗಳು ಸಹ ಒಬ್ಬರು. ಹಲವಾರು ಬಡ ಮಕ್ಕಳಿಗೆ ಅನ್ನದಾನ ಮಾಡಿ, ಅವರಿಗೆ ವಿದ್ಯಾಭ್ಯಾಸ ಕಲಿಸಿ, ಆಧ್ಯಾತ್ಮಿಕ ಮಾರ್ಗದರ್ಶನ ಕೊಟ್ಟರು. ಶ್ರೀಗಳು ಜಾತಿ-ಧರ್ಮಗಳ ತಾರತಮ್ಯವಿಲ್ಲದೇ ಎಲ್ಲರ ಕಲ್ಯಾಣಕ್ಕಾಗಿ ಶ್ರಮಿಸಿದರು.
ಶ್ರೀಗಳ ನೇತೃತ್ವದಲ್ಲಿನ ಸಿದ್ಧಗಂಗಾ ಮಠವು ಹಲವು ವಿದ್ಯಾಸಂಸ್ಥೆಗಳನ್ನು ಸ್ಥಾಪಿಸಿದೆ. ಇಲ್ಲಿ ವಿದ್ಯಾರ್ಥಿಗಳಿಗೆ ಸಂಪ್ರದಾಯಿಕ ಶಿಕ್ಷಣದ ಜೊತೆ ಅತ್ಯಾಧುನಿಕ ವಿಜ್ಞಾನ-ತಂತ್ರಜ್ಞಾನ ಶಿಕ್ಷಣವೂ ದೊರೆಯಿತು. ಸಮಾಜ ಮತ್ತು ಆಧ್ಯಾತ್ಮಿಕ ಲೋಕಕ್ಕಾಗಿ ಅಪಾರ ಕೊಡುಗೆಯನ್ನು ಗಮನಿಸಿದ ಕರ್ನಾಟಕ ವಿಶ್ವವಿದ್ಯಾಲಯವು ೧೯೬೫ರಲ್ಲಿ ಶ್ರೀಗಳಿಗೆ ಸಾಹಿತ್ಯದ ಗೌರವಾನ್ವಿತ ಡಾಕ್ಟರೇಟ್ ನೀಡಿ ಸನ್ಮಾನಿಸಿತು.
ಶ್ರೀ ಡಾ. ಶಿವಕುಮಾರ ಸ್ವಾಮಿಗಳ ಗುರುಕುಲದಲ್ಲಿ ಎಲ್ಲಾ ಜಾತಿ-ಧರ್ಮಗಳಿಗೆ ಸೇರಿದ ವಿದ್ಯಾರ್ಥಿಗಳಿಗೂ ಸಮನಾದ ಅವಕಾಶವಿತ್ತು. ೫ ರಿಂದ ೧೬ ವರ್ಷ ವಯಸ್ಕ ಮಕ್ಕಳಿಗೆ ಇಲ್ಲಿ ಉಚಿತ ಆಹಾರ, ಶಿಕ್ಷಣ ಮತ್ತು ವಸತಿ ನೀಡಲಾಗುತ್ತಿತ್ತು. ಇದಕ್ಕಾಗಿ ಶ್ರೀ ಡಾ. ಶಿವಕುಮಾರ ಸ್ವಾಮಿಗಳು “ತ್ರಿವಿಧ ದಾಸೋಹಿ” ಎಂಬ ಮನ್ನಣೆ ಗಳಿಸಿದರು.
ಶ್ರೀ ಡಾ. ಶಿವಕುಮಾರ ಸ್ವಾಮಿಗಳವರದು ಬಹಳಷ್ಟು ಚಟುವಟಿಕೆಗಳಿದ್ದ ಕಾರಣ ಅವರು ಕೇವಲ ೫ ತಾಸು ನಿದ್ರಿಸುತ್ತಿದ್ದರು ಎನ್ನಲಾಗಿದೆ. ತಮ್ಮ ಕಾರ್ಯಪ್ರವೃತ್ತಿಯ ಮನೋಭಾವದಿಂದ ಶ್ರೀ ಡಾ. ಶಿವಕುಮಾರ ಸ್ವಾಮಿಗಳು ಕಾಯಕವೇ ಕೈಲಾಸ ಎಂಬುದಕ್ಕೆ ಪರಿಪೂರ್ಣ ಅರ್ಥ ಕೊಡುತ್ತಿದ್ದರು.

ಡಾ. ಕಲಾಂ, ಡಾ. ಶ್ರೀ ಶ್ರೀ ಶಿವಕುಮಾರ ಸ್ವಾಮಿಗಳು
ಶ್ರೀ ಡಾ. ಶಿವಕುಮಾರ ಸ್ವಾಮಿಗಳು ೨೦೦೭ರಲ್ಲಿ ತಮ್ಮ ೧೦೦ನೆಯ ವಸಂತ ಪೂರೈಸಿದಾಗ ಮಾಜಿ ರಾಷ್ಟ್ರಪತಿ ಡಾ. ಎಪಿಜೆ ಅಬ್ದುಲ್ ಕಲಾಮ್ ತುಮಕೂರಿಗೆ ಆಗಮಿಸಿ ಸ್ವಾಮಿಗಳ ಸಮಾಜ ಸೇವೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಇದೇ ವರ್ಷ ಕರ್ನಾಟಕ ಸರ್ಕಾರವು ಶ್ರೀಗಳಿಗೆ ರಾಜ್ಯದ ಅತ್ಯುನ್ನತ “ಕರ್ನಾಟಕ ರತ್ನ” ನೀಡಿ ಗೌರವಿಸಿತು. ೨೦೧೫ರಲ್ಲಿ ಕೇಂದ್ರ ಸರ್ಕಾರವು ಶ್ರೀಗಳಿಗೆ ಪದ್ಮಭೂಷಣ ನೀಡಿ ಸನ್ಮಾನಿಸಿತು.
೨೦೧೬ರ ಜೂನ್ ತಿಂಗಳಿನಿಂದ ಶ್ರೀಗಳ ಆರೋಗ್ಯದಲ್ಲಿ ಸಣ್ಣ ಪುಟ್ಟ ಏರುಪೇರುಗಳು ಸಂಭವಿಸಿ, ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು ಸಂಪೂರ್ಣ ಗುಣಮುಖರಾಗುತ್ತಿದ್ದರು.
೨೦೧೭ರಲ್ಲಿ ಶ್ರೀಗಳು ಭಾರತದಲ್ಲೇ ಅತಿ ಹಿರಿಯ ವಯಸ್ಕ ವ್ಯಕ್ತಿಯಾದರು, ಹಾಗೂ ವಿಶ್ವದಲ್ಲಿ ೧೦೦ ಮಂದಿ ಅತಿಹಿರಿಯ ಜೀವಿತ ವ್ಯಕ್ತಿಗಳ ಪಟ್ಟಿಯಲ್ಲಿ ಏಕೈಕ ಭಾರತೀಯರಾಗಿದ್ದರು.
೨೦೧೮ರ ಡಿಸೆಂಬರ್ ತಿಂಗಳಲ್ಲಿ ಶ್ಚಾಸಕೋಸದ ಸೋಂಕು ತಗುಲಿ ಚೆನ್ನೈನ ಆಸ್ಪತ್ರೆಗೆ ಸೇರಿಸಲಾಯಿತು. ೨೦೧೯ರ ಜನವರಿ ೧೬ರಂದು ತಮ್ಮನ್ನು ಮಠಕ್ಕೆ ಸ್ಥಳಾಂತರಿಸುವಂತೆ ಶ್ರೀಗಳು ಕೋರಿದರು. ಇದರಂತೆ ಅವರನ್ನು ಸಿದ್ಧಗಂಗಾ ಮಠಕ್ಕೆ ವಾಪಸ್ ಕರೆತರಲಾಯಿತು. ೨೦೧೯ರ ಜನವರಿ ೨೧ರಂದು ಬೆಳಿಗ್ಗೆ ೧೧.೪೪ಕ್ಕೆ ಶ್ರೀಗಳು ಶಿವೈಕ್ಯರಾದರು.
