ಭಾರತದ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಯೋಧರನ್ನು ಅವಮಾನಿಸುವಂತೆ ಮಾತನಾಡಬಾರದು ಎಂದು ಕೇಂದ್ರೀಯ ಸಚಿವ ಕರ್ನಲ್ ರಾಜ್ಯವರ್ಧನ್ ಸಿಂಗ್ ರಾಠೋರ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ರಾಹುಲ್ಗೆ ಚಾಟಿ ಬೀಸಿದರು.
“ರಫೇಲ್ ಒಪ್ಪಂದಕ್ಕೆ ವ್ಯಯಿಸುವ ೩೦,೦೦೦ ಕೋಟಿ ರೂಪಾಯಿಗಳನ್ನು ಐಎಎಫ್ ಪೈಲಟ್ಗಳು ಸತ್ತಾಗ ಅವರ ಕುಟುಂಬಕ್ಕೆ ಪರಿಹಾರ ನೀಡಲು ಬಳಸಬಹುದಿತ್ತು” ಎಂಬ ರಾಹುಲ್ ಹೇಳಿಕೆಗೆ ಕರ್ನಲ್ ರಾಠೋರ್ ತಿರುಗೇಟು ನೀಡಿದರು.
“ನಮ್ಮ ಮಿಲಿಟರಿ ಬಗ್ಗೆ ನಿಮಗೆ ಏನೂ ಗೊತ್ತಿಲ್ಲ. ಸುದ್ದಿಗೋಷ್ಠಿಯಲ್ಲಿ ನೀವು ನಮ್ಮ ಸಶಸ್ತ್ರ ಪಡೆಗಳನ್ನು ಅವಮಾನ ಮಾಡುತ್ತಿದ್ದೀರಿ. ಈ ದೇಶದಲ್ಲಿ ಹುಟ್ಟಿದ ಪ್ರತಿಯೊಬ್ಬ ವ್ಯಕ್ತಿಯೂ ನಮ್ಮ ಮಿಲಿಟರಿ ಮತ್ತು ಹುತಾತ್ಮರಿಗೆ ನಿಮ್ಮ ತರಹ ಅಗೌರವ ತೋರುವುದಿಲ್ಲ. ನಮ್ಮ ಯೋಧರು ದೇಶಕ್ಕಾಗಿ ಮತ್ತು ಆತ್ಮಗೌರವಕ್ಕಾಗಿ ಹೋರಾಡುತ್ತಾರೆಯೇ ಹೊರತು, ಹಣಕ್ಕಲ್ಲ” ಎಂದು ಸಚಿವ ಕರ್ನಲ್ ರಾಠೋಡ್ ರಾಹುಲ್ಗೆ ತಿರುಗೇಟು ನೀಡಿದರು.
“ನೀವು ರಾಜಕೀಯ ಮಾಡಿ, ಆದರೆ ನಮ್ಮ ಸೇನಾಪಡೆಗಳನ್ನು ಮತ್ತು ಹುತಾತ್ಮ ಯೋಧರನ್ನು ಅವಮಾನಿಸಬೇಡಿ ಎಂದು ಒಬ್ಬ ಸೈನಿಕನಾಗಿ ನಾನು ಈ ಮಾತನ್ನು ಹೇಳುತ್ತಿದ್ದೇನೆ” ಎಂದು ಕರ್ನಲ್ ರಾಠೋರ್ ರಾಹುಲ್ಗೆ ಕಿವಿಮಾತು ಹೇಳಿದರು.
ರಾಜಕೀಯಕ್ಕೆ ಬರುವ ಮನ್ನ ರಾಜ್ಯವರ್ಧನ್ ಸಿಂಗ್ ರಾಠೋರ್ ಭಾರತೀಯ ಭೂಸೇನೆಯಲ್ಲಿ ಸೇವೆ ಸಲ್ಲಿಸಿ, ಅತಿ ವಿಶಿಷ್ಠ ಸೇವಾ ಪದಕ ಪಡೆದವರಾಗಿದ್ದರು. ಸೇನಾ ಸೇವೆಯಿಂದ ನಿವೃತ್ತರಾದಾಗ ಕರ್ನಲ್ ಆಗಿದ್ದರು. ಅಲ್ಲದೆ, ೨೦೦೪ರಲ್ಲಿ ಅಥೆನ್ಸ್ನಲ್ಲಿ ನಡೆದ ಒಲಿಂಪಿಕ್ ಕ್ರೀಡಾಕೂಟದಲ್ಲಿ ಡಬಲ್ ಟ್ರ್ಯಾಪ್ ಷೂಟಿಂಗ್ ಸ್ಪರ್ಧೆಯಲ್ಲಿ ಬೆಳ್ಳಿಯ ಪದಕ ಗೆದ್ದರು. ರಾಠೋರ್ ಪದ್ಮಶ್ರೀ ಪುರಸ್ಕೃತರೂ ಆಗಿದ್ದಾರೆ. ಅವರು ಭಾರತೀಯ ಜನತಾ ಪಕ್ಷವನ್ನು ಸೇರಿ, ೨೦೧೪ರ ಲೋಕಸಭಾ ಚುನಾವಣೆಯಲ್ಲಿ ಜೈಪುರ್ ಗ್ರಾಮಾಂತರದಿಂದ ಸ್ಪರ್ಧಿಸಿ ಗೆದ್ದು, ನರೇಂದ್ರ ಮೋದಿ ಸರ್ಕಾರದಲ್ಲಿ ಕೇಂದ್ರೀಯ ರಾಜ್ಯ ಮಂತ್ರಿಯಾದರು.
ಸಿಬಿನ್ ಪನಯಿಲ್ ಸೊಮನ್
ಇಂಡ್ಸಮಾಚಾರ್, ಸಾಗರ
