ಬಸವ ತತ್ವಗಳ ಸಾಫಲ್ಯದ ಉಸಿರು
ಸಚ್ಚರಿತ ಗುಣಗಳ ಮೈದುಂಬಿದ ಹೊನಲು
ಸಾರುವೆಯಿರದ ಹಾದಿಯ ಕರುಣಾಳು
ನಮ್ಮ ನಡೆದಾಡುವ ದೇವರು
ಆದರ್ಶವೆ ಉಸಿರಾಡಿದ ಯೋಗಿಯು
ವಿದ್ಯಾದೀವಟಿಗೆ ಬೆಳಗಿದ ರವಿಯು
ಬೇದವೆಣಿಸದ ಮಮತಾ ಮಡಿಲು
ಎಲ್ಲರ ಮನದಲಿ ನಿತ್ಯ ಬೆಳಗುವ ಜ್ಯೋತಿಯು
ಹಂದೆ ಮನದಲಿ ಛಲವು ಉಕ್ಕಿಸಿದವರು
ಅಳಲು ತುಂಬಿದವರಲಿ ಸಂತಸವರಳಿಸಿದವರು
ದುಮ್ಮಾನಗಳ ಬದುಕಲಿ ನವ್ಯತೆ ತಂದವರು
ನಮ್ಮ ನಡೆದಾಡುವ ದೇವರು
ಕಾಠಿಣ್ಯದ ದಾರಿಯನು ಹೂವಾಗಿಸಿದವರು
ಮೌಡ್ಯದ ಕಹಿಯನು ದಮನಿಸಿದವರು
ಗಂಡು ಹೆಣ್ಣು ಸರಿಸಮವೆಂದವರು
ಸ್ತ್ರೀಕುಲವೇ ಜಗದಸಿರಿಯೆಂದು ಸಾರಿದವರು
ಜಾತಿ ಧರ್ಮಗಳ ಸಂಕೋಲೆಯನು
ಪುಡಿಮಾಡಿ ನಕ್ಕವರು
ಶಿಲೆಯ ತಲೆಯಲ್ಲಿ ಹೂವರಳಿಸಿದವರು
ಬರಡು ಮನದಲ್ಲಿ ಹೂ ತುಂಬಿದಾ ಮೋಡಿಗಾರರು
ನಮ್ಮ ನಡೆದಾಡುವ ದೇವರು
ಯಾರಿಲ್ಲವೆಂದವರಿಗೆ ಸ್ನೇಹದ ಸೆಲೆಯಾಗಿ
ಬದುಕಿಗೆಲ್ಲ ಚೈತನ್ಯಧಾರೆಯಾಗಿ ನಕ್ಕವರು
ನಾಡಿನೆಲ್ಲ ಸಜ್ಜನರ ಮಹಲು ಕಟ್ಟಿದವರು
ದುಡಿವ ಕೈಗಳಿಗೆ ಸ್ವರ್ಗವೇ ಕೈಸೆರೆಯೆಂದವರು
ಭೂತಾಯ ಒಲುಮೆಯ ವರವು
ಅಸತ್ಯದ ದಹನಕೆ ಕೈಕಟ್ಟಿದ ಹಠಯೋಗಿಯು
ಸತ್ಯದ ಹಾದಿಯಲಿ ಅವಿರತ ಸಾಗಿದವರು
ದೇಹದಿಂದ ಮರೆಯಾದರೇನು?
ಜಗದ ಸತ್ಯದ ಗೂಡಲಿ ನಿತ್ಯ ಬೆಳಗುವ ದೀಪವು
ನಮ್ಮ ನಡೆದಾಡುವ ದೇವರು
ಲೇಖಕರು: ರಾಮಚಂದ್ರ ಸಾಗರ್