ಕಾವೇರಿ ಬೋಗುಣಿ ಪ್ರದೇಶದಲ್ಲಿ ಬಸವೇಶ್ವರ ಲಘು ಜಲವಿದ್ಯುತ್ ಯೋಜನೆಗೆ ಎಚ್ ಡಿ ಕುಮಾರಸ್ವಾಮಿ ನೇತೃತ್ವದ ರಾಜ್ಯ ಸರ್ಕಾರವು ಒಪ್ಪಿಗೆ ನೀಡಿದೆ. ಈ ಖಾಸಗಿ ಸ್ವಾಮ್ಯ ಯೋಜನೆಯು ಚಾಮರಾಜನಗರದ ಕೊಳ್ಳೇಗಾಲ ತಾಲೂಕು ಶಿವನಸಮುದ್ರದ ಸರ್ವೇ ಸಂ. ೧ರಲ್ಲಿ ಸ್ಥಾಪನೆಯಾಗಲಿದೆ.
ಈ ಹೊಸ ಯೋಜನೆಯು ಹೆಚ್ವುವರಿ ೨೪.೭೫ ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಲಿದೆ ಎನ್ನಲಾಗಿದೆ. ಪಕ್ಕದಲ್ಲಿರುವ ರಂಗನಾಥ ಸ್ವಾಮಿ ಲಘು ಜಲವಿದ್ಯುತ್ ಯೋಜನೆಯು ೨೪.೭೫ ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುತ್ತಿದೆ. ಎರಡನ್ನೂ ಕೂಡಿದರೆ ಒಟ್ಟು ೪೯.೫ ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಬಹುದು ಎಂದು ಸರ್ಕಾರ ಲೆಕ್ಕಾಚಾರ ಹಾಕಿದೆ.
ಹಿಂದಿನ ಸಿದ್ದರಾಮಯ್ಯ ಸರ್ಕಾರವು ಈ ಯೋಜನೆಯನ್ನು ಎರಡು ಬಾರಿ ತಿರಸ್ಕರಿಸಿತ್ತು. ಈ ಯೋಜನೆಗೆ ಸಂಬಂಧಿಸಿ ಹಲವಾರು ಅಕ್ರಮಗಳು ಕಂಡುಬಂದವು ಹಾಗೂ ರಾಜ್ಯ ಉಚ್ವ ನ್ಯಾಯಾಲಯದ ನಿರ್ದೇಶನಗಳ ವಿರುದ್ಧವಾಗಿದೆ ಎಂದು ಆ ಸರ್ಕಾರ ತಿರಸ್ಕರಿಸಿದಕ್ಕೆ ಕಾರಣ ನೀಡಿತ್ತು.
ರಾಜ್ಯ ಉಚ್ಚ ನ್ಯಾಯಾಲಯವು ನೇಮಿಸಿದ್ದ ತಜ್ಞರ ಸಮಿತಿಯು ಸಮೀಕ್ಷೆ ನಡೆಸಿ ವರದಿ ಸಲ್ಲಿಸಿದ ಪ್ರಕಾರ, ಅಲ್ಲಿ ಎಂಟು ಲಘು ಜಲವಿದ್ಯುತ್ ಯೋಜನೆಗಳಿವೆ. ನದಿ ವ್ಯವಸ್ಥೆಯ ಮೇಲೆ ಇವುಗಳ ಪ್ರಭಾವವನ್ನು ಅಧ್ಯಯನ ಮಾಡಿಯೇ ಬೇರೆ ಯೋಜನೆಯ ಸೂಕ್ತತೆಯ ಬಗ್ಗೆ ನಿರ್ಧಾರ ಕೈಗೊಳ್ಳಬಹುದು ಎಂದು ತಿಳಿಸಿತ್ತು.
೨೦೧೩ರ ಏಪ್ರಿಲ್ ತಿಂಗಳಲ್ಲಿ ಕೇಂದ್ರ ಸರ್ಕಾರದ ಪರಿಸರ ಮತ್ತು ಅರಣ್ಯ ಮಂತ್ರಾಲಯದ ರಾಜ್ಯ ವಿಭಾಗವೂ ಸಹ ಈ ಯೋಜನೆಯನ್ನು ತಿರಸ್ಕರಿಸಿ, ಪಯೊನಿಯರ್ ಪವರ್ ಕಾರ್ಪೊರೇಷನ್ ಲಿಮಿಟೆಡ್ ಇಂದ ಬಳಕೆಯಾಗದ ೦.೫ ಹೆಕ್ಟೇರ್ರಷ್ಟು ಕಾಡು ಪ್ರದೇಶವನ್ನು ವಶಪಡಿಸಿಕೊಂಡು, ರಂಗನಾಥಸ್ವಾಮಿ ಯೋಜನೆಯ ಗಡಿಗಳನ್ನು ಗುರುತಿಸಲು ಸೂಚಿಸಿತ್ತು.
೨೦೧೫ರಲ್ಲಿ ರಾಜ್ಯ ವನ್ಯಜೀವಿ ಮಂಡಳಿಯು ಈ ಯೋಜನೆಯನ್ನು ತಿರಸ್ಕರಿಸಿತ್ತು. ಈ ಯೋಜನೆಯು ಬಹಳ ಸೂಕ್ಷ್ಮ ಪರಿಸರ ವಲಯದಲ್ಲಿದೆ. ಇಲ್ಲಿ ಕಾವೇರಿ ರಕ್ಷಿತಾರಣ್ಯವಿದೆ. ಇದು ಆನೆಗಳು ಓಡಾಡುವ ಬೀಡು ಸಹ ಹೌದು. ಈ ಯೋಜನೆಗಾಗಿ ನೀರು ಹರಿವಿನ ದಿಕ್ಕನ್ನೇ ಬದಲಾಯಿಸಬೇಕಾದೀತು. ಈ ಲಘು ಜಲವಿದ್ಯುತ್ ವ್ಯವಸ್ಥೆಯು ಕೇವಲ ೨-೩ ತಿಂಗಳುಗಳಿಗೆ ಮಾತ್ರ ವಿದ್ಯುತ್ ಉತ್ಪಾದಿಸುತ್ತದೆ. ಜೊತೆಗೆ, ಆನೆ, ಚಿರತೆ, ಕರಡಿ, ಹುಲಿಯಂತಹ ಪ್ರಾಣಿಗಳ ಓಡಾಡಕ್ಕೆ ಅಡ್ಡಿಯಾಗಬಹುದು ಎಂದು ವರದಿಯಲ್ಲಿ ತಿಳಿಸಲಾಗಿತ್ತು. ಇದು ಖಾಸಗಿ ಯೋಜನೆ ಎಂದು ಪರಿಗಣಿಸಿದ ಸಿದ್ದರಾಮಯ್ಯ ಸರ್ಕಾರವು ಈ ಪ್ರಸ್ತಾಪಿತ ಯೋಜನೆಯನ್ನು ತಿರಸ್ಕರಿಸಿತ್ತು.
ರಾಜ್ಯ ಉಚ್ಚ ನ್ಯಾಯಾಲಯವು ನೇಮಿಸಿದ್ದ ಕರ್ನಾಟಕ ಆನೆ ತಜ್ಞರ ಸಮಿತಿಯು ೨೦೧೨ರಲ್ಲಿ ತನ್ನ ವರದಿಯನ್ನು ಸಲ್ಲಿಸಿತು. ಭಾರಿ ಕೊಳವೆಗಳು (ಪೆನ್ಸ್ಟಾಕ್ಸ್) ಆನೆಗಳ ಓಡಾಟಕ್ಕೆ ಅಡ್ಡಿಯಾಗುತ್ತವೆ. ಈ ವರದಿ ಪರಿಗಣಿಸಿದ ಉಚ್ಚ ನ್ಯಾಯಾಲಯವು, ಯೋಜನೆಯನ್ನು ತಿರಸ್ಕರಿಸಿತು. ಅಲ್ಲದೆ, ಆನೆಗಳು ಓಡಾಡುವ ಜಾಗಗಳಲ್ಲಿರುವ ಎಲ್ಲಾ ಯೋಜನೆಗಳನ್ನು ಪರಿಶೀಲಿಸಲು ಆದೇಶ ಹೊರಡಿಸಿತು.
