ಪಶ್ಚಿಮ ಘಟ್ಟ ಪ್ರದೇಶವು ಜಗತ್ತಿನ ಪ್ರಮುಖವಾದ ಹಾಗೂ ವಿಸ್ಮಯಕಾರಿಯಾದ ಹದಿನೆಂಟು ಜೀವವೈವಿಧ್ಯತಾ ತಾಣಗಳಲ್ಲಿ ಒಂದು. ಇದು ಜನೆಟಿಕ್ ಭಂಡಾರ. ನೀರನ್ನು ಹಿಡಿದಿಟ್ಟುಕೊಂಡು ನದಿಗಳನ್ನು ವರ್ಷವಿಡೀ ಹರಿಸುವ ಮತ್ತು ಈ ಮೂಲಕ ಕೊಟ್ಯಾಂತರ ಜನರ ಜೀವನಕ್ಕೆ ಆಧಾರವಾದ ತಾಯಿ. ಮಾರುತಗಳನ್ನು ತನ್ನ ನಿತ್ಯ ಹರಿದ್ವರ್ಣದ ಮಳೇ ಕಾಡುಗಳಿಂದ ತಡೆದು ಮಳೆಯನ್ನು ಸುರಿಸುವ ಅದ್ಭುತ. ಯೂನೆಸ್ಕೋ ಇದನ್ನು ಜಾಗತಿಕ ಪಾರಂಪರಿಕ ತಾಣವನ್ನಾಗಿ ಪರಿಗಣಿಸಿದೆ.
ಇಲ್ಲಿನ ಕಾಡುಗಳು ಜಿನುಗಿಸುವ ನೀರಿನಿಂದ ಹರಿವ ತುಂಗಾ, ಭಧ್ರಾ, ಕೃಷ್ಣ, ಕಾವೇರಿ, ನೇತ್ರಾವತಿ, ವರಾಹಿ, ಮಾಲತಿ, ಕಾಳಿ ಮುಂತಾದ ನದಿಗಳು ಕೋಟ್ಯಾಂತರ ಜನರಿಗೆ ನೀಡುತ್ತಿರುವ ಕುಡಿಯುವ ನೀರು, ಕೃಷಿ – ಕೈಗಾರಿಕೆಗಳಿಗೆ ಆಸರೆಯಾಗುತ್ತಾ ಅದು ಪೊರೆದಿರುವ ಆರ್ಥಿಕತೆ, ಇವೆಲ್ಲದರ ಅನುಕೂಲ ಪಡೆಯುತ್ತಿರುವ ರಾಜ್ಯಗಳು ಹಲವಾರು.
ಈ ಎಲ್ಲ ವಿಚಾರಗಳ ಹಿನ್ನೆಲೆಯಲ್ಲಿ ವೈವಿಧ್ಯಮಯ ಅರಣ್ಯವನ್ನು ಹೊಂದಿರುವ ಪಶ್ಛಿಮ ಘಟ್ಟಗಳ ಸಂರಕ್ಷಣೆಯು ಎಷ್ಟು ಮುಖ್ಯವೆಂಬುದು ತಿಳಿಯುತ್ತದೆ. ಇದು ದಕ್ಷಿಣ ಭಾರತದ ನೀರಿನ ಭದ್ರತೆಗೂ ತುಂಬ ಮಹತ್ವವನ್ನು ಪಡೆದಿದೆ. ಆದರೆ ಈ ಪ್ರದೇಶದ ಮೇಲೆ ಅವ್ಯಾಹತವಾಗಿ ನಡೆಯುತ್ತಿರುವ ಬೆಳವಣಿಗೆಗಳು ತೀವ್ರ ಆತಂಕಕ್ಕೆ ಕಾರಣವಾಗಿವೆ. ಇಲ್ಲಿನ ಗಣಿಗಾರಿಕೆ, ಅರಣ್ಯ ನಾಶ, ಕೈಗಾರಿಕಾ ನೆಡುತೋಪುಗಳು, ರಿಯಲ್ ಎಸ್ಟೇಟ್ ಬೆಳವಣಿಗೆ, ಒತ್ತೂವರಿಗಳು, ಇವೆಲ್ಲ ಯಾವ ಅಂಕೆಯೂ ಇಲ್ಲದಂತೆ ನೆರವೇರುತ್ತಿದೆ.
ನದಿ-ತೊರೆಗಳ ಪಕ್ಕದ ತಗ್ಗು ಪ್ರದೇಶಗಳಲ್ಲಿನ ಕೃಷಿ ಭೂಮಿಗಳು ಸೈಟುಗಳಾಗಿ ಬದಲಾವಣೆ ಹೊಂದುತ್ತಿವೆ. ಆ ಭಾಗದಲ್ಲಿ ಉಂಟಾಗುವ ತ್ಯಾಜ್ಯವು ಡ್ರೈನೇಜ್ ಮೂಲಕವಾಗಿ ನದಿಯನ್ನು ಸೇರುತ್ತಿದೆ. ಜನವಸತಿ ಪ್ರದೇಶಗಳ ಸಾಂದ್ರತೆ ಹೆಚ್ಚುತ್ತಿದ್ದಂತೆ ಈ ಕಾರಣದಿಂದ ಕಾಡಿನ ನಾಶವೂ ಸಾಗುತ್ತಿದೆ. ಕಾಡುಪ್ರಾಣಿಗಳಿಗೆ ಆಹಾರದ ಸಮಸ್ಯೆಯೂ ಉಂಟಾಗಿ ಅವುಗಳು ನಶಿಸಿ ಹೋಗುತ್ತಿವೆ ಅಥವ ತಮ್ಮ ಉಳಿವಿಗಾಗಿ ಕೃಷಿ ಭೂಮಿಯತ್ತ ಧಾವಿಸುತ್ತಿವೆ. ಹೀಗೆ ಕಾಡು ಪ್ರಾಣಿಗಳಿಗೂ, ರೈತರಿಗೂ ಸಂಘರ್ಷ ಏರ್ಪಡುತ್ತಿದೆ.
ರಿಯಲ್ ಎಸ್ಟೇಟ್ ಚಟುವಟಿಕೆಗಳಿಂದಾಗಿ ರೈತರಿಗೆ ಕೃಷಿಯ ಬದಲಾಗಿ ತಮ್ಮ ಭೂಮಿಯನ್ನು ಹೆಚ್ಚು ಹಣ ಉಂಟುಮಾಡುವ ಸೈಟ್ ಗಳನ್ನಾಗಿ ಪರಿವರ್ತಿಸುವ ಒತ್ತಡ ಮೂಡುತ್ತಿದೆ, ಇದರಿಂದಾಗಿ ಸ್ಥಳೀಯ ಬಡವರು, ಗಿರಿಜನರೂ ಮುಂತಾದ ಹಿಂದುಳಿದ ಸಮುದಾಯಗಳಿಗೆ ತಮ್ಮದೇ ನೆಲೆಯನ್ನು ಹೊಂದುವ ಅವಕಾಶವು ಸಾಧ್ಯವಿಲ್ಲದಂತಾಗುತ್ತಿದೆ. ಅವರೆಲ್ಲ ಪುನಹ ಕಾಡಿನತ್ತ ಸಾಗುತ್ತಾ ಅನಧಿಕೃತ ಅವಕಾಶಗಳನ್ನು ಹೊಂದಬೇಕಾಗಿದೆ. ಕೊಡಗು, ಚಿಕ್ಕಮಗಳೂರು, ಹಾಸನ ಜಿಲ್ಲೆಯ ಸಕಲೇಶಪುರ ಮುಂತಾದ ಕಡೆಗಳಲ್ಲಿ ನೂರಾರು ಎಕರೆ ವಿಸ್ತೀರ್ಣದ ಕಾಪಿ ಪ್ಲಾಂಟೇಶನ್ ಗಳು ಜನವಸತಿಯ ಟೌನ್ ಶಿಪ್ ಗಳಾಗಿ ಬದಲಾವಣೆ ಹೊಂದುವ ಚಟುವಟಿಕೆಗಳು ಸಾಗಿವೆ. ಇದಕ್ಕಾಗಿ ಭಾರೀ ಬಂಡವಾಳ ಹೂಡಿಕೆಯೂ ಶುರುವಾಗಿದೆ.
ಹೀಗೆ ಪರ್ವತ ಪರಿಸರದ ಭಾಗವಾಗಿರುವ ಮತ್ತು ಅದರ ಕಣಿವೆಗಳಲ್ಲಿ ತೊರೆಗಳನ್ನು ಹೊಂದಿರುವ ಇಂತಹ ಪರಿಸರ ಸೂಕ್ಷ್ಮ ಪ್ರದೇಶಗಳು ವಿನಾಶವನ್ನು ಹೊಂದುತ್ತಿರುವುದು ಮುಂದೆ ಏರ್ಪಡುವ ಶುದ್ದ ನೀರಿನ ಬವಣೆಗಳಿಗೆ ಕಾರಣವಾಗಲಿವೆ.
ಈ ಬೆಳವಣಿಗೆಗಳು ಉಂಟುಮಾಡುವ ಪರಿಣಾಮಗಳನ್ನು ಹೀಗೆ ಪಟ್ಟಿ ಮಾಡಬಹುದು.
೧. ಕೃಷಿ – ತೋಟಗಾರಿಕೆ ಅಥವ ಪ್ಲಾಂಟೇಶನ್ ಗಳಲ್ಲಿ ಏರ್ಪಡುವ ಟೌನ್ ಶಿಪ್ ಗಳು ಮುಂದೆ ಅದನ್ನು ಅವಲಂಬಿಸುವ ಅನಧಿಕೃತವಾದ ಉಪ ಜನವಸತಿ ಪ್ರದೇಶಗಳ ಸೃಷ್ಟಿಗೆ (ಸ್ಲಂ) ಕಾರಣವಾಗುತ್ತವೆ. ಇವೆರಡೂ ಸೇರಿ ಅರಣ್ಯ ನಾಶಕ್ಕೂ, ಪ್ರಾಣಿ ಪಕ್ಷಿಗಳ ಮತ್ತು ನದಿ ತೊರೆಗಳ ವಿನಾಶಕ್ಕೂ ಕಾರಣವಾಗಲಿವೆ.
೨. ಈ ಜನವಸತಿಗಳು ಉತ್ಪಾದಿಸುವ ಕೊಳಚೆ ನೀರು ತೊರೆ ಕೆರೆ, ಡ್ಯಾಂಗಳಲ್ಲಿ ಸಂಗ್ರಹವಾಗುತ್ತವೆ.
೩. ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಹೆಚ್ಚು ರಸ್ತೆಗಳನ್ನೂ, ವಿದ್ಯುತ್ ಲೈನ್ ಗಳನ್ನೂ ಮಾಡಬೇಕಾಗುತ್ತದೆ. ಹಾಗು ಕಟ್ಟಡ ನಿರ್ಮಾಣಕ್ಕಾಗಿ ನದಿಯ ಮರಳನ್ನೂ ಹೆಚ್ಚು ಹೆಚ್ಚು ತೆಗೆಯಬೇಕಾಗುತ್ತದೆ. ಕಲ್ಲುಗಳಿಗಾಗಿ ಗಣಿಗಾರಿಕೆ ಹೆಚ್ಚುತ್ತದೆ.
೪. ಆ ಪ್ರದೇಶದಲ್ಲಿ ಲಭ್ಯವಿರುವ ಸೀಮಿತ ಪ್ರಮಾಣದ ನೀರನ್ನು ಜನವಸತಿಗಳಿಗೆ ಕಲ್ಪಿಸಿಕೊಳ್ಳುವ ಅಗತ್ಯ ಮೂಡುತ್ತದೆ. ಆಗ ಕೃಷಿಕರಿಗೆ ನೀರಿನ ಲಭ್ಯತೆಯಲ್ಲಿ ಕೊರತೆ ಮೂಡುತ್ತದೆ. ಈ ಮೂಲಕವಾಗಿ ಸಂಘರ್ಷ ಏರ್ಪಡುವ ಸನ್ನಿವೇಶವು ಉದ್ಭವಿಸುತ್ತದೆ. ಹೆಚ್ಚು ಬೋರ್ವೆಲ್ ಗಳನ್ನು ತೋಡುತ್ತಾ ಅಮೂಲ್ಯವಾದ ಅಂತರ್ಜಲದ ಬಳಕೆ ಹೆಚ್ಚಬೇಕಾಗುತ್ತದೆ.
೫. ವನ್ಯಜೀವಿಗಳ ಧಾಮಗಳಾದ ಭದ್ರಾ ಹುಲಿ ಧಾಮ, ಮುತ್ತೋಡಿ, ಕುದುರೇಮುಖ ರಾಷ್ಟ್ರೀಯ ಉದ್ಯಾನ, ರಕ್ಷಿತ ಅರಣ್ಯ ಮುಂತಾದವುಗಳ ಮೇಲೆ ಒತ್ತಡ ಮೂಡುತ್ತಾ ಪ್ರಾಣಿ ಹಾಗು ಜನವಸತಿ ಪ್ರದೇಶಗಳ ನಡುವೆ ಸಂಘರ್ಷ ಏರ್ಪಡುತ್ತದೆ.
ಈ ರೀತಿಯ ಬೆಳವಣಿಗೆಗಳು ಈಗಾಗಲೇ ಗೋವಾ, ಕೊಡೈಕೆನಾಲ್, ಊಟಿ, ಮುಂತಾದ ಕಡೆಗಳಲ್ಲಿ ಏರ್ಪಟ್ಟಿವೆ. ಊಟಿಯಲ್ಲಂತೂ ಕೊಳಚೆ ನೀರಿನ ವಾಸನೆಯು ಇಡೀ ಊರನ್ನು ವ್ಯಾಪಿಸಿದೆ. ಪರಿಸರ ಮನೋಹರ ಗಿರಿಧಾಮಗಳು ಇಂದು ಪರಿಸರ ನಾಶದ ಕೇಂದ್ರಗಳಾಗಿ ಬದಲಾಗಿವೆ. ಈ ಸಮಸ್ಯೆಗಳನ್ನು ಪುನ: ಮೂಲ ಸ್ಥಿತಿಗೆ ಕೊಂಡೊಯ್ಯಲಾರದಷ್ಟು ಹಾನಿಗೆ ಒಳಗಾಗಿವೆ. ಆದರೆ ಸರಿಪಡಿಸಲು ಸರ್ಕಾರವು ಕೋಟ್ಯಾಂತರ ರೂಪಾಯಿ ಹಣವನ್ನು ಸುರಿಯುತ್ತಲೇ ಹೋಗಬೇಕಾಗಿದೆ. ಇದು ಕಲುಷಿತಗೊಂಡ ಗಂಗಾ ನದಿಯ ಪುನರುಜ್ಜೀವನಕ್ಕೆಂದು ಪ್ರತಿವರ್ಷ ವ್ಯಯಿಸುವ ನೂರಾರು ಕೋಟಿಗಳ ವ್ಯರ್ಥ ಪ್ರಯತ್ನದಂತೆ ಸಾಗಬೇಕಾಗಿದೆ.
ಇದೇ ರೀತಿಯ ತಪ್ಪು ಮಾರ್ಗಗಳನ್ನು ನಮ್ಮ ರಾಜ್ಯವೂ ಅನುಸರಿಸಬಾರದು. ನಮ್ಮ ಪರಿಸರ ಸೂಕ್ಷ್ಮ ಪ್ರದೇಶಗಳನ್ನು ಹೊಂದಿರುವ ಚಿಕ್ಕ ಮಂಗಳೂರು, ಶಿವಮೋಗ್ಗ, ಹಾಸನ, ಉತ್ತರ ಹಾಗು ದಕ್ಷಿಣ ಕನ್ನಡ ಮುಂತಾದ ಜಿಲ್ಲೆಗಳು ಈ ಕುರಿತಾಗಿ ಈಗಲೇ ಎಚ್ಚೆತ್ತುಕೊಳ್ಳಬೇಕಾಗಿದೆ. ಸರ್ಕಾರವು ಈ ಕುರಿತು ಗಂಭೀರವಾದ ನಿಲುವುಗಳನ್ನು ಹೊಂದಬೇಕಾಗಿದೆ. ಕೃಷಿ ಬಳಕೆಯ ಸತ್ವಯುತ ಭೂ ಪ್ರದೇಶವನ್ನು ಯಾವ ಕಾರಣಕ್ಕೂ ಕೃಷ್ಯೇತರ ಭೂಮಿಯಾಗಿ ಪರಿವರ್ತಿಸದಂತೆ ಕಠಿಣ ಕಾನೂನನ್ನು ಅನುಸರಿಸಬೇಕಾಗಿದೆ. ಈಗಾಗಲೇ ಹಾಗೆ ಪರಿವರ್ತಿಸಿದ ಭೂಮಿಗಳು ಯಾವ ಯಾವ ಕಾರಣಗಳಿಂದ ಬದಲಾವಣೆಗೊಳ್ಳಲು ಸಾಧ್ಯವಾಗಿವೆ ಎಂಬುದನ್ನು ಸರ್ಕಾರ ತನಿಖೆಗೆ ಒಳಪಡಿಸಬೇಕು. ಏಕೆಂದರೆ ರಾಜಕಾರಣಿಗಳು, ಅಧಿಕಾರಿಗಳು ಹಾಗು ರಿಯಲ್ ಎಸ್ಟೇಟ್ ವ್ಯವಹಾರದಾರರ ನಡುವಿನ ಅಪವಿತ್ರ ಸಂಬಂಧಗಳಿಂದ ಕಾನೂನು ಉಲ್ಲಂಘನೆ ನಡೆದಿರುವ ಅನೇಕ ಉದಾಹರಣೆಗಳು ಈ ಭಾಗದಲ್ಲಿ ಮೇಲ್ನೋಟಕ್ಕೇ ಕಂಡುಬರುತ್ತಿವೆ.
ನಾಡಿನ ಜನರ ಜೀವನಾಡಿಯಾದ ಪಶ್ಚಿಮ ಘಟ್ಟ ಪ್ರದೇಶವನ್ನು ರಕ್ಷಿಸುವುದು ಹಾಗು ಉತ್ತಮ ಪಡಿಸುವುದು ಸಂವಿಧಾನ ಬದ್ದ ಕರ್ತವ್ಯಎಂಬುದನ್ನು ಸರ್ಕಾರವು ಮನಗಾಣಬೇಕಾಗಿದೆ. ಇದಕ್ಕೆ ಉಂಟುಮಾಡುವ ಚ್ಯುತಿಯು ಸಂವಿಧಾನಕ್ಕೆ ಬಗೆಯುವ ಅಪಚಾರ ಮಾತ್ರವಲ್ಲ ಜೀವಕುಲಕ್ಕೇ ಮಾಡುವ ದ್ರೋಹವೆಂದಾಗುತ್ತದೆ ಎಂಬುದನ್ನು ನಮ್ಮನ್ನು ಆಳುತ್ತಿರುವ ಸರ್ಕಾರವು ತಿಳಿಯಬೇಕಾಗಿದೆ.
ಅತಿಥಿ ಲೇಖಕರು: ಶ್ರೀಧರ್ ಕಲ್ಲಹಳ್ಳ
