ಅರುಣ್ ಜೇಟ್ಲಿ: ಹದಿನೆಂಟು ತಿಂಗಳುಗಳಲ್ಲಿ ಮಧ್ಯಮ ವರ್ಗದ ಜನತೆಗೆ ವರವಾದ ಜಿಎಸ್ಟಿ
ಸರಕು ಮತ್ತು ಸೇವಾ ತರಿಗೆ (ಜಿಎಸ್ಟಿ) ಯನ್ನು ೨೦೧೭ ಇಸವಿಯ ಜುಲೈ ೧ರಂದು ಇಡೀ ಭಾರತದಾದ್ಯಂತ ಜಾರಿಗೊಳಿಸಲಾಯಿತು. ಇದು ಅನುಷ್ಠಾನಗೊಂಡು ಇನ್ನೂ ಹದಿನೆಂಟು ತಿಂಗಳು ಪೂರ್ಣವಾಗಿಲ್ಲ. ಜಿಎಸ್ಟಿ ಬಹಳಷ್ಟು ಅರೆಬೆಂದ ಹಾಗು ದುಷ್ಪ್ರೇರೇಪಿತ ಟೀಕೆಗಳಿಗೆ ಗುರಿಯಾಗಿದೆ. ಅದರ ನಿಜವಾದ ಕಾರ್ಯಕ್ಷಮತೆ ಏನು?
ಜಿಎಸ್ಟಿ-ಪೂರ್ವ ತೆರಿಗೆ ವ್ಯವಸ್ಥೆ
ಭಾರತವು ವಿಶ್ವದಲ್ಲೇ ಅತ್ಯಂತ ಕೆಟ್ಟದಾದ ಪರೋಕ್ಷ ತೆರಿಗೆ ವ್ಯವಸ್ಥೆಯನ್ನು ಹೊಂದಿತ್ತು. ತೆರಿಗೆಗಳನ್ನು ವಿಧಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡಕ್ಕೂ ಅವಕಾಶವಿತ್ತು. ಹದಿನೇಳು ತೆರಿಗೆಗಳ್ನು ವಿಧಿಸಲಾಗಿತ್ತು. ಆದ್ದರಿಂದ, ಒಬ್ಬ ವಾಣಿಜ್ಯೋದ್ಯಮಿಯು ಹದಿನೇಳು ತನಿಖಾಧಿಕಾರಿಗಳು, ಹದಿನೇಳು ಆದಾಯ ಮತ್ತು ಹದಿನೇಳು ಮೌಲ್ಯಮಾಪನ ಪ್ರಕ್ರಿಯೆಗಳನ್ನು ಎದುರಿಸಬೇಕಾಯಿತು. ತೆರಿಗೆಯ ದರಗಳು ವಿಪರೀತ ಹೆಚ್ಚಾಗಿದ್ದವು. ಮೌಲ್ಯವರ್ಧಿತ ತೆರಿಗೆ (ವ್ಯಾಟ್ (VAT)) ಮತ್ತು ಅಬಕಾರಿ ತೆರಿಗೆಯ ಪ್ರಮಾಣಿತ ದರ ಕ್ರಮವಾಗಿ ೧೪.೫% ಮತ್ತು ೧೨.೫% ಆಗಿದ್ದವು. ಇದಕ್ಕೆ ಕೇಂದ್ರೀಯ ಮಾರಾಟ ತೆರಿಗೆ (ಸಿಎಸ್ಟಿ (CST)) ಸೇರಿಸುವುದರಿಂದ ಒಂದು ತೆರಿಗೆಯ ಮೇಲೆ ಇನ್ನೊಂದು ತೆರಿಗೆಯ ಪರಿಣಾಮವನ್ನು ಲೆಕ್ಕಿಸಬಹುದಾಗಿತ್ತು. ಇದರಿಂದಾಗಿ, ಬಹಳಷ್ಟು ಸಂಖ್ಯೆಯ ಸರಕುಗಳ ಮೇಲೆ ಪ್ರಮಾಣಿತ ದರವು ೩೧%ರಷ್ಟಿತ್ತು. ತೆರಿಗೆ ಮೌಲ್ಯಮಾನಕ್ಕೊಳಗಾವುವವರ ಮುಂದೆ ಕೇವಲ ಎರಡೇ ಆಯ್ಕೆಗಳಿದ್ದವು: ದುಬಾರಿ ತೆರಿಗೆ ಪಾವತಿಸುವುದು ಅಥವಾ ಅದನ್ನು ತಪ್ಪಿಸುವುದು. ತೆರಿಗೆಯಿಂದ ತಪ್ಪಿಸಿಕೊಳ್ಳುವು ಪ್ರವೃತ್ತಿ ಬಹುಮಟ್ಟಿಗೆ ಚಾಲ್ತಿಯಲ್ಲಿತ್ತು. ಭಾರತದಲ್ಲಿ ಅನೇಕ ರೀತಿಯ ಮಾರುಕಟ್ಟೆಗಳಿದ್ದವು. ರಾಜ್ಯವಾರು ತೆರಿಗೆ ದರವು ವಿಭಿನ್ನವಾಗಿರುವುದರಿಂದ ಪ್ರತಿಯೊಂದು ರಾಜ್ಯವು ಪ್ರತ್ಯೇಕ ಮಾರುಕಟ್ಟೆಯಾಗಿತ್ತು. ಸರಕು ವಾಹನಗಳು (ಲಾರಿಗಳು ಇತ್ಯಾದಿ) ಅಂತರರಾಜ್ಯ ಗಡಿಗಳಲ್ಲಿ ಗಂಟೆಗಟ್ಟಲೆ ಅಥವಾ ದಿನಗಟ್ಟಲೆ ಕಾಯಬೇಕಾದ ಪರಿಣಾಮವಾಗಿ, ಅಂತರರಾಜ್ಯ ಮಾರಾಟವು ಬಹಳಷ್ಟು ಮಟ್ಟಿಗೆ ಕುಂಠಿತಗೊಳ್ಳುತ್ತಿತ್ತು.
ಜುಲೈ 1, 2017 ರಂದು ಪ್ರಭಾವ ಬೀರಿದ ಜಿಎಸ್ಟಿ
ಜಿಎಸ್ಟಿ ತನ್ನ ಅನುಷ್ಠಾನದ ದಿನಾಂಕದಿಂದ ಅಂದಿನ ತನಕ ಇದ್ದ ಪರಿಸ್ಥಿತಿಯನ್ನು ತೀವ್ರವಾಗಿ ಬದಲಾಯಿಸಿತು. ಎಲ್ಲ ಹದಿನೇಳು ತೆರಿಗೆಗಳನ್ನೂ ಒಂದುಗೂಡಿಸಲಾಯಿತು. ಇಡೀ ಭಾರತವು ಒಂದು ಮಾರುಕಟ್ಟೆಯಾಯಿತು. ಅಂತರರಾಜ್ಯ ಅಡೆತಡೆಗಳು ಕಣ್ಮರೆಯಾದವು. ಪ್ರವೇಶ ತೆರಿಗೆ(Entry Tax)ಯನ್ನು ರದ್ದುಪಡಿಸುವುದರಿಂದ ನಗರಗಳಿಗೆ ಸರಕು ವಾಹನಗಳ ಪ್ರವೇಶ ಸರಾಗವಾಯಿತು. ರಾಜ್ಯಗಳು ೩೫% ರಿಂದ ೧೧೦% ವರೆಗಿನ ಮನರಂಜನಾ ತೆರಿಗೆಯನ್ನು ವಿಧಿಸುತ್ತಿದ್ದವು. ಇದು ಬಹಳ ಬೇಗ ಇಳಿಮುಖವಾಯಿತು. ೨೩೫ ವಸ್ತುಗಳ ಮೇಲೆ ೩೧% ಅಥವಾ ಅದಕ್ಕಿಂತ ಹೆಚ್ಚಿನ ತೆರಿಗೆ ವಿಧಿಸಲಾಗುತ್ತಿತ್ತು. ೧೦ ವಸ್ತುಗಳನ್ನು ಹೊರತುಪಡಿಸಿ ಇಂತಹ ಎಲ್ಲ ವಸ್ತುಗಳ ಮೇಲಿನ ತೆರಿಗೆ ದರವನ್ನು ಕೂಡಲೇ ೨೮% ಗೆ ಇಳಿಸಲಾಯಿತು. ಈ ೧೦ ವಸ್ತುಗಳ ತೆರಿಗೆ ದರವನ್ನು ಇನ್ನೂ ಕಡಿಮೆ – ಅಂದರೆ ೧೮% ಕ್ಕೆ – ಇಳಿಸಲಾಯಿತು. ಯಾವುದೇ ಸರಕುಗಳ ತೆರಿಗೆ ಆಮೂಲಾಗ್ರವಾಗಿ ಏರಿಕೆಯಾಗುವುದನ್ನು ತಡೆಗಟ್ಟಲು ಬಹು ಮಟ್ಟದ ತೆರಿಗೆ ದರಗಳನ್ನು ಅಶಾಶ್ವತವಾಗಿ ವಿಧಿಸಲಾಯಿತು. ಇದು ಹಣದುಬ್ಬರದ ಪ್ರಭಾವವನ್ನು ನಿಯಂತ್ರಿಸಿತು. ದೇಶದ ಸಾಮಾನ್ಯ ವ್ಯಕ್ತಿ ಬಳಸುವ ವಸ್ತುಗಳಲ್ಲಿ ಬಹಳಷ್ಟಕ್ಕೆ ೦% ಅಥವಾ ೫% ಜಿಎಸ್ಟಿ ದರವು ಅನ್ವಯಿಸುತ್ತದೆ. ಜಿಎಸ್ಟಿ ಪಾವತಿಸುವ ಪ್ರಕ್ರಿಯೆ ಆನ್ಲೈನ್ ಆಯಿತು, ಜಿಎಸ್ಟಿ ಮೌಲ್ಯಮಾಪನವೂ ಆನ್ಲೈನ್ ಆಯಿತು, ಇದರಿಂದಾಗಿ ಹಲವಾರು ತೆರಿಗೆ ಪರಿಶೀಲಕರ ಅಗತ್ಯವೂ ಇರದಂತಾಯಿತು. ರಾಜ್ಯಗಳಿಗೆ ಮೊದಲ ಐದು ವರ್ಷಗಳ ಕಾಲ ೧೪% ವಾರ್ಷಿಕ ಆದಾಯ ಏರಿಕೆ ಖಚಿತವಾಗಿತ್ತು.
ಆದಾಯದ ಪ್ರವೃತ್ತಿಗಳು
ಆದಾಯದ ಸ್ಥಿತಿ ಏನೇನೂ ಸಾಲದು ಎಂಬುದು ಪದೇ-ಪದೇ ಕೇಳಿಬರುವ ಮಾತಾಗಿತ್ತು. ಆದಾಯದ ಗುರಿ ಹಾಗೂ ಹೆಚ್ಚಳದ ಬಗ್ಗೆ ಅಸಮರ್ಪಕ ಮಾಹಿತಿಯಲ್ಲದೆ ಆಡಲಾದ ಮಾತಿದು. ಜಿಎಸ್ಟಿ ವ್ಯವಸ್ಥೆಯಲ್ಲಿ ರಾಜ್ಯಕ್ಕೆ ನಿಗದಿಪಡಿಸಲಾದ ಆದಾಯ ಗುರಿಗಳು ಹಿಂದೆಂದೂ ಕಾಣದಷ್ಟು ದೊಡ್ಡವಾಗಿವೆ. ಜಿಎಸ್ಟಿ ೨೦೧೭ರ ಜುಲೈ ೧ರಿಂದ ಜಾರಿಗೆ ಬಂದರೂ ಆದಾಯ ಹೆಚ್ಚಳದ ಮೂಲ ವರ್ಷವನ್ನು ೨೦೧೫-೧೬ ಇಂದ ಲೆಕ್ಕಕ್ಕೆ ತೆಗೆದುಕೊಳ್ಳಲಾಗಿದೆ. ಪ್ರತಿ ವರ್ಷವೂ ೧೪% ರಷ್ಟು ಹೆಚ್ಚಳದ ಭರವಸೆ ಇದೆ. ಹಾಗಾಗಿ, ಜಿಎಸ್ಟಿ ಪ್ರಾರಂಭವಾದಾಗಿನಿಂದ 18 ತಿಂಗಳು ಪೂರ್ಣವಾಗದಿದ್ದರೂ, ಈ ದಿನದಲ್ಲಿ ಪ್ರತಿ ರಾಜ್ಯವು ತನ್ನ ಆದಾಯವನ್ನು ಸುಧಾರಿಸುವ ಗುರಿಯನ್ನು ಹೊಂದಿದೆ, ಇದು ೨೦೧೫-೧೬ರ ಮೂಲ ವರ್ಷದಿಂದ ಲೆಕ್ಕ ತೆಗೆದುಕೊಂಡು, ಮೂರು ವರ್ಷಗಳ ಅವಧಿಯಲ್ಲಿ ವಾರ್ಷಿಕವಾಗಿ ೧೪% ರಷ್ಟು ಒಟ್ಟುಗೂಡಿಸುತ್ತದೆ. ಇದು ಎರಡನೆಯ ವರ್ಷದಲ್ಲೇ ೫೦% ರ ಸನಿಹ ತಲುಪಿದೆ. ಇದು ಬಹುಮಟ್ಟಿಗೆ ಅಸಾಧ್ಯ ಗುರಿಯಾಗಿದೆ. ಆದಾಗ್ಯೂ, ಆರು ರಾಜ್ಯಗಳು ಈಗಾಗಲೇ ಈ ಗುರಿ ತಲುಪಿ ಸಾಧಿಸಿವೆ, ಇನ್ನೂ ಏಳು ರಾಜ್ಯಗಳು ಗುರಿ ತಲುಪುವಷ್ಟರಲ್ಲಿವೆ, ಹಾಗೂ ಕೇವಲ ೧೮ ರಾಜ್ಯಗಳು ಗುರಿ ಸಾಧನೆಯಿಂದ ಸುಮಾರು ೧೦%ರಷ್ಟು ಹಿಂದಿವೆಯಷ್ಟೆ. ವ್ಯಾಟ್ನಂತೆ, ಆದಾಯವನ್ನು ಹೆಚ್ಚಿಸುವ ಮತ್ತು ಅಂತರವನ್ನು ನಗಣ್ಯಗೊಳಿಸುವ ಸಾಮರ್ಥ್ಯವು ಮೂರನೆಯ, ನಾಲ್ಕನೇ ಮತ್ತು ಐದನೆಯ ವರ್ಷದಲ್ಲಿ ಗಣನೀಯವಾಗಿ ಹೆಚ್ಚುತ್ತದೆ. ೧೪% ರ ಗುರಿ ತಲುಪದ ರಾಜ್ಯಗಳಿಗೆ ವ್ಯತ್ಯಾಸದ ಮೊತ್ತವನ್ನು ಪರಿಹಾರ ಸೆಸ್ನಿಂದ ನೀಡಲಾಗುತ್ತದೆ. ಎರಡನೆಯ ವರ್ಷದಲ್ಲಿನ ಪರಿಹಾರ ಸೆಸ್ನ ಅಗತ್ಯವು ಮೊದಲನೆಯ ವರ್ಷದ ಮೊತ್ತಕ್ಕಿಂತ ಕಡಿಮೆಯಿರುತ್ತದೆಂದು ನಿರೀಕ್ಷಿಸಲಾಗಿದೆ. ಜಿಎಸ್ಟಿ ಯಲ್ಲಿ ಗಮನಾರ್ಹ ದರ ಕಡಿತವನ್ನು ಪರಿಗಣಿಸಿ ತೆರಿಗೆ ಸಂಗ್ರಹದಲ್ಲಿ ಈ ಹೆಚ್ಚಳವನ್ನು ಲೆಕ್ಕಿಸಬೇಕು. ಹಣಕಾಸಿನ ಪರಿಭಾಷೆಯಲ್ಲಿ ವರ್ಷಕ್ಕೆ ೮೦,೦೦೦ ಕೋಟಿ ರೂಪಾಯಿಗಳಷ್ಟು ಕಡಿತವಾದಂತಿದೆ. ಗಣನೀಯ ಪ್ರಮಾಣದ ತೆರಿಗೆ ಕಡಿತದ ಹೊರತಾಗಿಯೂ, ಮೊದಲ ವರ್ಷಕ್ಕೆ ಹೋಲಿಸಿದರೆ, ಈ ವರ್ಷದ ಮೊದಲ ಆರು ತಿಂಗಳುಗಳಲ್ಲಿ ಜಿಎಸ್ಟಿ ಸಂಗ್ರಹವು ಗಮನಾರ್ಹ ಸುಧಾರಣೆ ತೋರಿಸಿದೆ. ಮೊದಲ ವರ್ಷದಲ್ಲಿ ಸಂಗ್ರಹಿಸಿದ ಸರಾಸರಿ ಮಾಸಿಕ ತೆರಿಗೆ ೮೯,೭೦೦ ಕೋಟಿ ರೂಪಾಯಿಗಳಾಗಿದ್ದರೆ. ಎರಡನೇ ವರ್ಷದಲ್ಲಿ ಅದು ೯೭,೧೦೦ ಕೋಟಿ ರೂಪಾಯಿಗಳಾಗಿದ್ದವು.
ದರ ತರ್ಕಬದ್ಧಗೊಳಿಸುವಿಕೆ
ಜಿಎಸ್ಟಿ ಪೂರ್ವ-ವ್ಯವಸ್ಥೆಯಲ್ಲಿ ಅಪಾರ ಸಂಖ್ಯೆಯಲ್ಲಿನ ಸರಕುಗಳ ಮೇಲೆ ಭಾರೀ ತೆರಿಗೆ ವಿಧಿಸಲಾಗಿದ್ದ ಪರಿಸ್ಥಿತೆ ನಮ್ಮ ಮುಂದಿತ್ತು. ಕಾಂಗ್ರೆಸ್ ಆಡಲಿತದಲ್ಲಿನ ಪರೋಕ್ಷ ತೆರಿಗೆಯು ೩೧%ರಷ್ಟಿತ್ತು. ನಾವು ಇವೆಲ್ಲವನ್ನೂ ೨೮% ದರದ ಪಟ್ಟಿಗೆ ಸೇರಿಸಿದೆವು. ಆದಾಯ ಹೆಚ್ಚುತ್ತಿದ್ದಂತೆ ನಾವು ದರವನ್ನು ತಗ್ಗಿಸಲು ಪ್ರಾರಂಭಿಸಿದೆವು. ಹೆಚ್ಚಿನ ಸರಕುಗಳ ಮೇಲಿನ ತೆರಿಗೆ ಕಡಿಮೆಯಾಗಿದೆ. ಇಂದು, ತಂಬಾಕು ಉತ್ಪನ್ನಗಳು, ಐಷಾರಾಮಿ ವಾಹನಗಳು, ಕಾಕಂಬಿ, ಹವಾನಿಯಂತ್ರಣಾ ಯಂತ್ರಗಳು, ಗಾಳಿಯುಕ್ತ ನೀರು, ದೊಡ್ಡ ಗಾತ್ರದ ಟಿವಿಗಳು ಮತ್ತು ಪಾತ್ರೆ ತೊಳೆಯುವ ಯಂತ್ರಗಳನ್ನು ಹೊರತುಪಡಿಸಿ, ಎಲ್ಲಾ ೨೮ ವಸ್ತುಗಳನ್ನು ೨೮% ಜಿಎಸ್ಟಿ ದರ ಪಟ್ಟಿಯಿಂದ ೧೮% ಮತ್ತು ೧೨% ಜಿಎಸ್ಟಿ ದರ ಪಟ್ಟಿಗಳಿಗೆ ವರ್ಗಾಯಿಸಲಾಗಿದೆ. ೨೮% ರ ಜಿಎಸ್ಟಿ ದರದ ಪಟ್ಟಿಯಲ್ಲಿರುವಂತಹ ಸಾಮಾನ್ಯ ಬಳಕೆ ವಸ್ತುಗಳೆಂದರೆ ಕೇವಲ ಸಿಮೆಂಟ್ ಮತ್ತು ವಾಹನ ಬಿಡಿಭಾಗಗಳು. ಸಿಮೆಂಟನ್ನು ಕಡಿಮೆ ಜಿಎಸ್ಟಿ ದರಪಟ್ಟಿಗೆ ಸ್ಥಳಾಂತರಿಸುವುದು ನಮ್ಮ ಧ್ಯೇಯವಾಗಿದೆ. ಇತರೆ ಎಲ್ಲ ಕಟ್ಟಡ ನಿರ್ಮಾಣ ಸಾಮಗ್ರಿಗಳ ಮೇಲಿನ ಜಿಎಸ್ಟಿ ದರವನ್ನು ೨೮%ರಿಂದ ೧೮%ಕ್ಕೆ ಸ್ಥಳಾಂತರಿಸಲಾಗಿದೆ. ೨೮% ಜಿಎಸ್ಟಿ ದರವು ತನ್ನ ಅಂತಿಮ ದಿನಗಳನ್ನು ಕಾಣುತ್ತಿದೆ.
ಬಳಸಲಾಗುವ ೧೨೧೬ ಸರಕುಗಳ ಪೈಕಿ, ಸ್ಥೂಲವಾಗಿ ೧೮೩ ಸರಕುಗಳ ಮೇಲೆ ಶೂನ್ಯ, ೩೦೮ ಸರಕುಗಳ ಮೇಲೆ ೫%, ೧೭೮ ಸರಕುಗಳ ಮೇಲೆ ೧೨% ಹಾಗೂ ೫೧೭ ಸರಕುಗಳ ಮೇಲೆ ೧೮% ತೆರಿಗೆ ದರ ಅನ್ವಯಿಸುತ್ತದೆ. ೨೮% ತೆರಿಗೆಯ ದರವು ತನ್ನ ಕೊನೆಯ ದಿನಗಳನ್ನು ಕಾಣುತ್ತಿದೆ. ಉಪಾಹರಗೃಹಗಳಿಗೆ ವಹಿವಾಟಿನ ಸಂಯೋಜನೆಯಡಿಯಲ್ಲಿ ೫% ರಷ್ಟು ತೆರಿಗೆಯನ್ನು ವಿಧಿಸಲಾಗುತ್ತಿದೆ. ೨೦ ಲಕ್ಷ ರೂಪಾಯಿಗಳ ತನಕದ ವಹಿವಾಟು ಮಾಡಿದವರಿಗೆ ತೆರಿಗೆ ಪಾವತಿಸುವುದರಿಂದ ವಿನಾಯತಿ ಸಿಗುತ್ತದೆ. ೧ ಕೋಟಿ ರೂಪಾಯಿಗಳವರೆಗೆ ವಹಿವಾಟು ಮಾಡಿದವರು ೧% ತೆರಿಗೆಯನ್ನು ಪಾವತಿಸುವ ಮೂಲಕ ಸಂಯುಕ್ತ ತೆರಿಗೆ ವ್ಯವಸ್ಥೆಯನ್ನು ಪಡೆಯಬಹುದು. ಸಣ್ಣ ಸೇವಾ ತೆರಿಗೆ ಮೌಲ್ಯಮಾಪನಕ್ಕೊಳಗಾದುವವರಿಗೆ ಸಂಯುಕ್ತ ತೆರಿಗೆ ಯೋಜನೆಯು ಪರಿಗಣನೆಯಲ್ಲಿದೆ. ಸಿನಿಮಾ ಟಿಕೆಟ್ಗಳ ಮೇಲಿದ್ದ ೩೫% ರಿಂದ ೧೧೦% ರಷ್ಟು ತೆರಿಗೆಯನ್ನು ೧೨% ಮತ್ತು ೧೮% ಗೆ ಇಳಿಸಲಾಗಿದೆ. ಹಣದುಬ್ಬರವನ್ನು ನಿಯಂತ್ರಿಸುವಲ್ಲಿ ಜಿಎಸ್ಟಿ ಬಹಳ ಉಪಯುಕ್ತವಾಗಿದೆ. ತೆರಿಗೆ ತಪ್ಪಿಸುವ ಪ್ರಕರಣಗಳೂ ಸಹ ಕಡಿಮೆಯಾಗಿವೆ.
ನಿವ್ವಳ ಪರಿಣಾಮ
ತೆರಿಗೆಗಳ ಕಡಿಮೆ ದರ, ಹೆಚ್ಚಿದ ತೆರಿಗೆ ವ್ಯಾಪ್ತಿ, ಹೆಚ್ಚಿನ ಸಂಗ್ರಹಣೆಗಳು, ತೆರಿಗೆ ತರ್ಕಬದ್ಧಗೊಳಿಸುವಿಕೆಯ ಫಲವಾಗಿ ಮೌಲ್ಯಮಾಪನ ಪ್ರಕ್ರಿಯೆ ಸುಲಭವಾಗುವುದರೊಂದಿಗೆ, ಮುಂಬರುವ ವರ್ಷಗಳಲ್ಲಿ ಅಭಿವೃದ್ಧಿಯ ದರವು ಹೆಚ್ಚಾಗಲಿದೆ. ೧೮ ತಿಂಗಳುಗಳ ಅವಧಿಯಲ್ಲಿ ರೂಪಾಂತರ ಮಾಡಲಾಗಿದೆ. ಯಾವುದೇ ಹಠಾತ್ ರೂಪಾಂತರವು ಆದಾಯಕ್ಕೆ ಅಥವಾ ವ್ಯಾಪಾರಕ್ಕೆ ಹಾನಿಕರವಾಗಬಹುದು.
ಜಿಎಸ್ಟಿ ಸಮಿತಿ
ಜಿಎಸ್ಟಿ ಸಮಿತಿಯು ಇದುವರೆಗೂ ೩೧ ಸಭೆಗಳನ್ನು ನಡೆಸಿದೆ. ಇದು ಒಕ್ಕೂಟ ವ್ಯವಸ್ಥೆಯೊಂದಿಗೆ ಭಾರತದ ಮೊದಲ ಪ್ರಯೋಗವಾಗಿದೆ. ಈ ಜಿಎಸ್ಟಿ ಸಮಿತಿ ಅತ್ಯಂತ ಜವಾಬ್ದಾರಿಯುತವಾಗಿ ತನ್ನ ಕಾರ್ಯ ನಿರ್ವಹಿಸುತ್ತಿದೆ. ಶಾಸಕಾಂಗ ಕರಡು ರಚನೆ, ನಿಯಮಗಳ ಕರಡು ರಚನೆ, ಅಧಿಸೂಚನೆಗಳು, ಆರಂಭಿಕ ದರಗಳನ್ನು ನಿಗಧಿಪಡಿಸುವುದು ಮತ್ತು ದರ ತರ್ಕಬದ್ಧಗೊಳಿಸುವಿಕೆ ಸೇರಿದಂತೆ ಸಾವಿರಾರು ನಿರ್ಧಾರಗಳನ್ನು ಒಮ್ಮತದ ಮೂಲಕ ತೆಗೆದುಕೊಳ್ಳಲಾಗಿದೆ. ಹೊರಗಿನ ರಾಜಕೀಯ ಹಾಹಾಕಾರಗಳು, ಜಿಎಸ್ಟಿ ಸಮಿತಿಯಲ್ಲಿನ ಸಾಮರಸ್ಯದೊಂದಿಗೆ ತೀರಾ ಅಸಮಂಜಸವಾಗಿದೆ.
ಭವಿಷ್ಯದ ರೂಪರೇಖೆಯ ಬಗ್ಗೆ ವೈಯಕ್ತಿಕ ಚಿಂತನೆ
ಜಿಎಸ್ಟಿ ರೂಪಾಂತರ ಪೂರ್ಣಗೊಂಡಿದ್ದು, ನಾವು ಜಿಎಸ್ಟಿ ದರಗಳ ತರ್ಕಬದ್ಧಗೊಳಿಸುವಿಕೆಯ ಮೊದಲ ಹಂತದ ಮುಕ್ತಾಯದ ಸನಿಹ ತಲುಪಿದ್ದೇವೆ. ಅಂದರೆ ಅತ್ಯೈಷಾರಾಮಿ ಸರಕುಗಳನ್ನು ಹೊರತುಪಡಿಸಿ ಇತರೆ ಎಲ್ಲಾ ವಸ್ತುಗಳನ್ನು ೨೮% ಜಿಎಸ್ಟಿ ದರಪಟ್ಟಿಯಿಂದ ಇತರೆ ದರಪಟ್ಟಿಗಳಿಗೆ ಸೇರಿಸುತ್ತೇವೆ. ೧೨% ಹಾಗೂ ೧೮% ರ ಎರಡು ಪ್ರಮಾಣಿತ ದರಗಳಿಂದ ಒಂದೇ ಪ್ರಮಾಣಿತ ದರದತ್ತ ಸರಕುಗಳನ್ನು ತರುವುದು ಭವಿಷ್ಯದ ರೂಪರೇಖೆಯ ಅಂಗವಾಗಿದೆ. ಈ ಹೊಸ ದರವು ೧೨% ಹಾಗು ೧೮% ದರಗಳ ನಡುವಣ ಮಧ್ಯದಲ್ಲಿರಬಹುದು. ತೆರಿಗೆ ಗಮನಾರ್ಹವಾಗಿ ಏರಿಕೆಯಾದಾಗ, ನಿಸ್ಸಂಶಯವಾಗಿ ಇದು ಕೆಲ ಸಮಂಜಸ ಸಮಯವನ್ನು ತೆಗೆದುಕೊಳ್ಳುತ್ತದೆ. ಅಂತಿಮವಾಗಿ, ದೇಶವು ಐಷಾರಾಮಿ ಹಾಗೂ ಅತ್ಯೈಷಾರಾಮಿ ಸರಕುಗಳ ಹೊರತುಪಡಿಸಿ ಇತರೆ ಎಲ್ಲ ಸರಕುಗಳಿಗೂ ೦%, ೫% ಹಾಗೂ ಪ್ರಮಾಣಿತ ದರಗಳ ಜಿಎಸ್ಟಿ ಯನ್ನು ಹೊಂದಿರಬೇಕು.
ಸಂಚಿಕೆ
ಒಟ್ಟು೧೨೧೬ ಉತ್ಪನ್ನಗಳಲ್ಲಿ೩೧% ಪರೋಕ್ಷ ತೆರಿಗೆ ವಿಧಿಸಿ ಭಾರತದಲ್ಲಿ ದಬ್ಬಾಳಿಕೆಯ ಸಾಮ್ರಾಜ್ಯ ನಡೆಸಿ, ಜಿಎಸ್ಟಿಯನ್ನು ವೃಥಾ ಟೀಕೆ ಮಾಡುತ್ತಿರುವವರು ಖಂಡಿತವಾಗಿಯೂ ಆತ್ಮಾವಲೋಕನ ಮಾಡಿಕೊಳ್ಳಬೇಕು. ಬೇಜವಾಬ್ದಾರಿ ರಾಜಕೀಯ ಮತ್ತು ಬೇಜವಾಬ್ದಾರಿ ಅರ್ಥಶಾಸ್ತ್ರವು ಕೇವಲ ಪ್ರಪಾತದತ್ತ ನಾಗಾಲೋಟವಷ್ಟೆ.
ಲೇಖಕರು: ಕೇಂದ್ರೀಯ ಹಣಕಾಸು ಸಚಿವ ಅರುಣ್ ಜೇಟ್ಲಿ
ಮೂಲ: ಎಫ್ಬಿ-ಬ್ಲಾಗ್
