ಜಾರ್ಜ್ ಮ್ಯಾಥ್ಯೂ ಪರ್ನಾಂಡೆಸ್ (೩ ಜೂನ್ ೧೯೩೦ – ೨೯ ಜನವರಿ ೨೦೧೯) ಭಾರತದ ಒಬ್ಬ ಕಾರ್ಮಿಕ ಮುಖಂಡ, ಸಮಾಜ ಸೇವಕ, ಪತ್ರಕರ್ತ ಹಾಗೂ ಸಮಾಜವಾದದ ರಾಜಕಾರಣಿಯಾಗಿದ್ದರು.
ಇವರು ಮಂಗಳೂರಿನ ರೋಮನ್ ಕ್ಯಾಥೊಲಿಕ್ ಕುಟುಂಬದಲ್ಲಿ ಜನಿಸಿದರು. ಮಂಗಳೂರಿನಲ್ಲಿ ೧೦ನೆಯ ತರಗತಿಯ ತನಕ ಓದಿದ ನಂತರ ಅವರ ಪೋಷಕರು ಜಾರ್ಜ್ ಪಾದ್ರಿಯಾಗಬೇಕು ಎಂದು ತೀರ್ಮಾನಿಸಿ ಬೆಂಗಳೂರಿಗೆ ಕಳುಹಿಸಿದರು. ಆದರೆ ಅಲ್ಲಿ ಅಚಾರಕ್ಕೂ ವಿಚಾರಕ್ಕೂ ವ್ಯತ್ಯಾಸವಿದ್ದರಿಂದ ಜುಗುಪ್ಸೆಗೊಂಡು ಅಲ್ಲಿಂದ ಹೊರಬಂದರು.
ಜಾರ್ಜ್ ಹೋಟೆಲ್, ದಿನಸಿ ಅಂಗಡಿ, ಮತ್ತು ಇತರೆ ಕಡೆ ಕೆಲಸ ಮಾಡುತ್ತಿದ್ದ ಅಸಂಘಟಿತ ಕಾರ್ಮಿಕರನ್ನು ಒಗ್ಗೂಡಿಸಿದರು. ಅವರು ಮುಂಬಯಿಗೆ ಹೋಗಿ ಅಲ್ಲಿಯೂ ಸಹ ಕಾರ್ಮಿಕ ಚಳುವಳಿಯಲ್ಲಿ ಪಾಲ್ಗೊಂಡು ಒಬ್ಬ ಸಮಾಜವಾದಿ ರಾಜಕರಣಿಯನಿಸಿಕೊಂಡರು.
ಭಾರತೀಯ ರೈಲ್ನಲ್ಲಿ ನೌಕರರಾಗಿದ್ದಾಗಲೇ ಹಲವು ಮುಷ್ಕರ ಮತ್ತು ಬಂದ್ಗಳನ್ನು ನಡೆಸಿದರು. ೧೯೬೭ರ ಸಂಸದೀಯ ಚುನಾವಣೆಗಳಲ್ಲಿ ದಕ್ಷಿಣ ಮುಂಬಯಿ ಕ್ಷೇತ್ರದಿಂದ ಜಾರ್ಜ್ ಫರ್ನಾಂಡೆಸ್ ಕಾಂಗ್ರೆಸ್ನ ಅಭ್ಯರ್ಥಿ ಎಸ್ ಕೆ ಪಾಟೀಲ್ ವಿರುದ್ಧ ದೊಡ್ಡ ಅಂತರದಿಂದ ಗೆದ್ದರು.
೧೯೭೪ರಲ್ಲಿ ರೈಲ್ವೆ ಬಂದ್ ದೇಶದಾಧ್ಯಂತ ರೈಲ್ವೆ ಸಂಚಾರವನ್ನೇ ಸ್ತಬ್ಧಗೊಳಿಸಿತು. ಇದರ ಮಾರನೆಯ ವರ್ಷ (೨೫ ಜೂನ್ ೧೯೭೫) ಅಂದಿನ ಪ್ರಧಾನಿ ಇಂದಿರಾ ಗಾಂಧಿ ತಮ್ಮ ಸರ್ವಾಧಿಕಾರವನ್ನು ಬಳಸಿ ತುರ್ತು ಪರಿಸ್ಥಿತಿ ಜಾರಿಗೊಳಿಸಿದರು. ಜಾರ್ಜ್ ಫರ್ನಾಂಡೆಸ್ ಭೂಗತರಾದರು. ಆದರೆ ಅವರು ಬರೋಡ ಡೈನಾಮೈಟ್ ಪ್ರಕರಣದಲ್ಲಿ ಬಂಧಿಯಾದರು. ಕೈಕೋಳ ತೊಡಿಸಿದ್ದ ಜಾರ್ಜ್ ಫರ್ನಾಂಡೆಸ್ರವರ ಕಪ್ಪು-ಬಿಳುಪಿನ ಚಿತ್ರ ಆ ಕಾಲದಲ್ಲಿ ಬಹಳಷ್ಟು ಸಂಚಲನ ಮೂಡಿಸಿತ್ತು.

ಬರೋಡಾ ಡೈನಾಮೈಟ್ ಪ್ರಕರಣದಲ್ಲಿ ಕೈಕೋಳಗಳಲ್ಲಿ ಬಂಧಿಯಾಗಿದ್ದ ಜಾರ್ಜ್ ಫರ್ನಾಂಡೆಸ್
೧೯೭೭ರಲ್ಲಿ ಲೋಕಸಭಾ ಚುನಾವಣೆಗಳು ನಡೆದಾಗ, ಇಂದಿರಾರ ಕಾಂಗ್ರೆಸ್ ಪಕ್ಷ ಸೋತು ಜನತಾ ಪಕ್ಷ ಅಧಿಕಾರಕ್ಕೆ ಬಂದಿತು. ಜನತಾ ಪಕ್ಷವು ಜಾರ್ಜ್ ಫರ್ನಾಂಡೆಸ್ ಹಾಗೂ ಇತರೆ ತುರ್ತು-ವಿರೋಧಿ ಪ್ರತಿಭಟನಾಕಾರರ ವಿರುದ್ಧದ ಕೇಸುಗಳನ್ನೆಲ್ಲ ಮುಚ್ಚಿ, ಆರೋಪಿಗಳನ್ನು ಬಿಡುಗಡೆಗೊಳಿಸಿತು.
೧೯೮೪ರಲ್ಲಿ ಇಂದಿರಾ ಗಾಂಧಿ ಹತ್ಯೆಯಾದ ಎರಡು ತಿಂಗಳಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಿತು. ಜಾರ್ಜ್ ಫರ್ನಾಂಡೆಸ್ ಜನತಾ ಪಕ್ಷದ ಅಭ್ಯರ್ಥಿಯಾಗಿ ಬೆಂಗಳೂರು ಉತ್ತರ ಕ್ಷೇತ್ರದಿಂದ ಸ್ಪರ್ಧಿಸಿ ಕಾಂಗ್ರೆಸ್ ಅಭ್ಯರ್ಥಿ ಜಾಫರ್ ಷರೀಫ್ ವಿರುದ್ಧ ಸೋತರು.
೧೯೮೯ರಲ್ಲಿ ಬಿಹಾರ್ನ ಮುಜಫರ್ಪುರದಿಂದ ಲೋಕಸಭಾ ಚುನಾವಣೆ ಸ್ಪರ್ಧಿಸಿ ಗೆದ್ದರು. ಬೊಫೊರ್ಸ್ ಹಗರಣದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಚುನಾವಣೆಯಲ್ಲಿ ಸೋತಿತು. ವಿಶ್ವನಾಥ್ ಪ್ರತಾಪ್ ಸಿಂಗ್ ನೇತೃತ್ವದ ಸರ್ಕಾರದಲ್ಲಿ ಜಾರ್ಜ್ ಫರ್ನಾಂಡೆಸ್ ರೈಲು ಮಂತ್ರಿಯಾದರು. ಕೊಂಕಣ್ ರೈಲ್ವೆ ಯೋಜನೆ ಚಾಲನೆಗೊಳಿಸಿದ್ದು ಇವರ ಹೆಗ್ಗಳಿಕೆಯಯಿತು.
೧೯೯೯ರಲ್ಲಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್ಡಿಎ ಅಧಿಕಾರಕ್ಕೆ ಬಂದಾಗ ಜಾರ್ಜ್ ಫರ್ನಾಂಡೆಸ್ ಕೇಂದ್ರೀಯ ರಕ್ಷಣಾ ಮಂತ್ರಿಯಾದರು. ಎಂಐಜಿ ಯುದ್ಧವಿಮಾನವೊಂದರಲ್ಲಿ ಅವರು ಪ್ರಾಯೋಗಿಕ ಹಾರಾಟ ನಡೆಸಿದರು.

ಎಂಐಜಿ ಯುದ್ಧವಿಮಾನದಲ್ಲಿ ಪ್ರಯೋಗಿಕ ಹಾರಾಟ ನೆಡೆಸಿದ ಫರ್ನಾಂಡೆಸ್. ಚಿತ್ರ ಕೃಪೆ: ವಿ ವಿ ಕೃಷ್ಣನ್ – ದಿ ಹಿಂದೂ
೨೦೦೨ರಲ್ಲಿ ಶವಪೆಟ್ಟಿಗೆ ಹಗರಣದಲ್ಲಿ ಫರ್ನಾಂಡೆಸ್ರನ್ನು ಆರೋಪಿ ಎನ್ನಲಾಯಿತು. ಸಿಬಿಐ ತನಿಖೆ ನಡೆಸಿ ಹಗರಣದಲ್ಲಿ ಫರ್ನಾಂಡೆಸ್ರದು ಯಾವುದೇ ಕೈವಾಡವಿಲ್ಲ ಎಂದು ನಿರ್ಣಯಿಸಿತು.
ಜಾರ್ಜ್ ಫರ್ನಾಂಡೆಸ್ ಹಿಂದಿ, ಇಂಗ್ಲಿಷ್, ಕನ್ನಡ, ತುಳು ಸೇರಿದಂತೆ ಹತ್ತು ಭಾಷೆಗಳನ್ನು ಬಲ್ಲವರಾಗಿದ್ದರು. ಕೊಂಕಣಿ ಇವರ ಮಾತ್ರಭಾಷೆಯಾಗಿತ್ತು.
ಅಲ್ಝೈಮರ್ಸ್ ರೋಗಕ್ಕೆ ತುತ್ತಾಗಿ ಸಕ್ರಿಯ ರಾಜಕಾರಣದಿಂದ ನಿವೃತ್ತರಾದರು. ೨೦೧೯ರ ಜನವರಿ ೨೯ರಂದು ಜಾರ್ಜ್ ಫರ್ನಾಂಡೆಸ್ ನಿಧನರಾದರು.
