ರಫೇಲ್ ಡೀಲ್ ಗೆ ಸಂಬಂಧಿಸಿದಂತೆ ಮಹಾಲೇಖಪಾಲರ (ಸಿಎಜಿ) ವರದಿಯನ್ನು ರಾಜ್ಯಸಭೆಯಲ್ಲಿ ಇಂದು ಮಂಡಿಸಲಾಗಿದ್ದು, ಭಾರೀ ವಿವಾದದ ಕಿಡಿಯೆಬ್ಬಿಸಿದ್ದ ಈ ಪ್ರಕರಣದಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಮೊದಲ ಹಂತದ ಜಯ ಸಿಕ್ಕಂತಾಗಿದೆ.
ಆ ವರದಿ ಏನು ಹೇಳುತ್ತದೆಂದರೆ, ಹಿಂದೆ ಡಸಾಲ್ಟ್ ಕಂಪನಿಯ ಜೊತೆ ಯುಪಿಎ ಸರಕಾರ ಮಾಡಿಕೊಂಡಿದ್ದ 126 ಯುದ್ಧ ವಿಮಾನಗಳ ಖರೀದಿಗೆ ಹೋಲಿಸಿದರೆ, ಸಂಪೂರ್ಣ ಪ್ಯಾಕೇಜ್ ಇರುವಂಥ 36 ರಫೇಲ್ ಯುದ್ಧ ವಿಮಾನಗಳ ಖರೀದಿಯಿಂದ ಭಾರತ ಶೇ.17.08ರಷ್ಟು ಹಣವನ್ನು ಉಳಿತಾಯ ಮಾಡಿದೆ. ಐವತ್ತೆಂಟು ಸಾವಿರ ಕೋಟಿ ರುಪಾಯಿ ರಫೇಲ್ ಡೀಲ್ ನಲ್ಲಿ ಎನ್ಡಿಎ ಸರಕಾರ ಭಾರೀ ಅಕ್ರಮವೆಸಗಿದ್ದು, ಕಡಿಮೆ ಬೆಲೆಗೆ ಸಿಗುತ್ತಿದ್ದ ಯುದ್ಧ ವಿಮಾನವನ್ನು ಹೆಚ್ಚು ಬೆಲೆಗೆ ಕೊಂಡಿದ್ದಲ್ಲದೆ, ಅನಿಲ್ ಅಂಬಾನಿಗೆ ಸೇರಿದ ರಿಲಯನ್ಸ್ ಡಿಫೆನ್ಸ್ ಕಂಪನಿಗೆ ಆಫ್ಸೆಟ್ ಪಾರ್ಟನರ್ಷಿಪ್ ಕೊಡಿಸಿ ಭಾರತದ ಕಣ್ಣಿಗೆ ಮಣ್ಣೆರಚಿದೆ ಎಂದು ರಾಹುಲ್ ಗಾಂಧಿ ಅವರು ಆರೋಪಿಸುತ್ತಲೇ ಇದ್ದಾರೆ.
ರಫೇಲ್: ಎರಡು ವಾರ ಮುನ್ನವಷ್ಟೇ ಫ್ರೆಂಚ್ ಅಧಿಕಾರಿಗಳನ್ನು ಭೇಟಿಮಾಡಿದ್ದ ಅಂಬಾನಿ ಹದಿನಾರನೇ ಲೋಕಸಭೆಯ ಕೊನೆಯ ಅಧಿವೇಶನದ ಕೊನೆಯ ದಿನವಾದ ಬುಧವಾರದಂದು ಕಾಂಗ್ರೆಸ್ ರಫೇಲ್ ಡೀಲ್ ವಿರುದ್ಧ ಮಹಾತ್ಮಾ ಗಾಂಧಿ ಪ್ರತಿಮೆಯೆದಿರು ಭಾರೀ ಪ್ರತಿಭಟನೆಯನ್ನು ನಡೆಸುತ್ತಿದ್ದು, ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಸಂಸದರು ‘ಚೌಕಿದಾರ್ ಚೋರ್ ಹೈ’ ಎಂಬ ಬ್ಯಾನರ್ ಹಿಡಿದುಕೊಂಡು, ಸಬ್ ಕೋ ಪತಾ ಹೈ, ಚೌಕಿದಾರ್ ಚೋರ್ ಹೈ ಎಂಬ ಘೋಷಣೆಗಳನ್ನು ಕೂಗುತ್ತಿದ್ದರು.
ಅರುಣ್ ಜೇಟ್ಲಿ ಪ್ರತಿಕ್ರಿಯೆ: ಸಿಎಜಿ ವರದಿಯಿಂದ ರಫೇಲ್ ಬಗ್ಗೆ ‘ಮಹಾಘಟಬಂಧನ್’ನ ಸುಳ್ಳುಗಳು ಮತ್ತೆ ಬಯಲಾಗಿವೆ ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಪ್ರತಿಕ್ರಿಯಿಸಿದ್ದಾರೆ. “ಸತತವಾಗಿ ದೇಶಕ್ಕೆ ಸುಳ್ಳುಗಳನ್ನು ಹೇಳುತ್ತಲೇ ಬರುತ್ತಿದ್ದ ಇಂಥವರನ್ನು ಪ್ರಜಾಪ್ರಭುತ್ವ ಹೇಗೆ ಶಿಕ್ಷಿಸಬೇಕು?” ಎಂದಿರುವ ಅವರು, ಸುಪ್ರೀಂ ತೀರ್ಪು ಸುಳ್ಳು, ಸಿಎಜಿ ವರದಿ ಸುಳ್ಳು ಎಂದಿರುವ ಆ ‘ಕುಟುಂಬ’ ಹೇಳಿದ್ದು ಮಾತ್ರ ನಿಜವೆ? ಎಂದು ಜೇಟ್ಲಿ ವ್ಯಂಗ್ಯವಾಡಿದ್ದಾರೆ.
