ಬೆಳಗಾವಿ-ಗೋವಾ ಹೆದ್ದಾರಿ ಯೋಜನೆ ವಿರುದ್ಧ ಸುಪ್ರೀಮ್ ಮೊರೆ ಹೋಗಲಿರುವ ಪರಿಸರವಾದಿಗಳು
ಬೆಳಗಾವಿ ಮತ್ತು ಗೋವಾ ನಡುವಣ ರಾಷ್ಟ್ರೀಯ ಹೆದ್ದಾರಿ ೪ಎ ಅಗಲಗೊಳಿಸುವ ಯೋಜನೆಯ ವಿರುದ್ಧ ಕರ್ನಾಟಕದಲ್ಲಿರುವ ಹಲವಾರು ಪರಿಸರವಾದಿಗಳು ಸರ್ವೋಚ್ಚ ನ್ಯಾಯಾಲಯದಲ್ಲಿ ಮನವಿ ಸಲ್ಲಿಸಲು ನಿರ್ಧರಿಸಿದ್ದಾರೆ.
ಬೆಳಗಾವಿ, ಉತ್ತರ ಕನ್ನಡ ಮತ್ತು ಧಾರವಾಡ ಜಿಲ್ಲೆಗಳಿಗೆ ಋತುವಿಗೆ ಅನುಗುಣವಾಗಿ ಭಾರಿ ಮಳೆ ತರುವ ಲಕ್ಷಾಂತರ ಮರಗಳಿಗೆ ಈ ಹೆದ್ದಾರಿ ಯೋಜನೆಯು ಹಾನಿಯೊಡ್ಡುತ್ತಿದೆ. ಕಾಳಿ, ಮಹದಾಯಿ ಹಾಗೂ ಮಲಪ್ರಭಾ ನದಿಗಳು ಈ ವಲಯದಲ್ಲಿ ಹುಟ್ಟುತ್ತವೆ. ಇಲ್ಲಿ ತೇವವುಳ್ಳ ದಟ್ಟ ಹಸಿರುಬನಗಳಿವೆ. ಮರಗಳ ನಾಶದಿಂದ ನೀರಿನ ಅಭಾವವುಂಟಾಗಿ ಕ್ರಷಿಗೆ ಬಹಳ ತೊಂದರೆಯಾಗುತ್ತದೆ; ಜೊತೆಗೆ ಮಾನವ-ಕಾಡುಪ್ರಾಣಿಗಳ ನಡುವೆ ಅಪಾಯಕಾರಿ ಘರ್ಷಣೆಯ ಪ್ರಮಾಣ ಹೆಚ್ಚಾಗಲಿದೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಕಾಡು ಪ್ರದೇಶದ ಮೂಲಕ ಹೋಗುವ ರಸ್ತೆಗಳನ್ನು ಚತುಷ್ಪಥ ರಸ್ತೆಯನ್ನಾಗಿಸಲು ಮುಂದಾಗಿದೆ. ಈ ಕಾಡು ಪ್ರದೇಶಗಳನ್ನು “Eco Class I – very dense forest” ಅಡಿ ವಿಂಗಡಿಸಲಾಗಿದೆ. ಈ ವಲಯದಲ್ಲಿ ಕಡಿಯಲಾದ ಮರಗಳು ವಿಶಿಷ್ಟವಾದದ್ದು, ಹಾಗೂ ಬೇರೆಡೆ ನೆಟ್ಟರೂ ಅವು ಬೆಳೆಯಲಾರವು. ಟಿಂಬರ್ ಲಾಬಿಯ ಒತ್ತಡಕ್ಕೆ ಮಣಿದು ಕಾಡುಗಳ ಮೂಲಕ ಚತುಷ್ಪಥ ರಸ್ತೆ ಯೋಜನೆಗೆ ಮುಂದಾದಂತಿದೆ. ಖ್ಯಾತ ಕನ್ನಡ ಚಲನಚಿತ್ರ ನಟ-ನಿರ್ದೇಶಕ ಮತ್ತು ಪರಿಸರವಾದಿ ಸುರೇಶ್ ಹೆಬ್ಳಿಕರ್, ಮಂಜುನಾಥ್ ಜೆ, ಪಿ ವಿ ಹಿರೇಮಠ್ ಸೇರಿದಂತೆ ಹಲವು ಪರಿಸರವಾದಿಗಳು ಈ ಹೆದ್ದಾರಿ ಯೋಜನೆಯ ವಿರುದ್ಧ ಆಕ್ಷೇಪವೆತ್ತಿದ್ದಾರೆ.
ಪರಿಸರವಾದಿಗಳು ಈ ಕೆಳಗಿನ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ:
- ಕಾಡಿನ ನಡುವಣ ರಸ್ತೆಗಳು ದ್ವಿಪಥವಾಗೇ ಇರಬೇಕು.
- ಯಾವುದೇ ವನ್ಯಜೀವಿ ಪಥದಲ್ಲಿ ಚತುಷ್ಪಥ ರಸ್ತೆ ನಿರ್ಮಾಣವಾಗಬಾರದು. ಆನೆಗಳು, ಅವುಗಳಲ್ಲೂ ವಿಶಿಷ್ಟವಾಗಿ ಆನೆ ಮರಿಗಳಿಗೆ ರಸ್ತೆ ದಾಟಲು ದುಸ್ತರವಾಗಬಹುದು. ವೇಗವಾಗಿ ಬರುವ ವಾಹನಳಿಗೆ ಢಿಕ್ಕಿ ಹೊಡೆಯುವ ಸಂಬವ ಹೆಚ್ಚಾಗುತ್ತದೆ.
- ಕಾಡುಗಳ ಮೂಲಕ ಹಾದುಹೋಗುವ ಎಲ್ಲ ರಸ್ತೆಗಲ್ಲಿಯೂ ವೇಗದ ಮಿತಿ ನಿಗಧಿಪಡಿಸಬೇಕು.
- Eco Class I ಅಡಿ ವಿಂಗಡಿಸಲಾಗಿರುವ ಅರಣ್ಯಗಳಲ್ಲಿ ರಸ್ತೆ ಅಗಲ ಮಾಡುವ ಯೋಜನೆ ಕೈಗೊಳ್ಳಲೇಬಾರದು.
- ಆನೆಗಳಿರುವ ಮೀಸಲು ಅರಣ್ಯಗಳ ಮೂಲಕ ರಾತ್ರಿ ಸಂಚಾರ ನಿಷೇಧಿಸಬೇಕು.
