ಹುಬ್ಬಳ್ಳಿ-ಅಂಕೋಲಾ ರೈಲ್ವೆ ಯೋಜನೆಯ ಬಗ್ಗೆ ಜ. ೯ರಂದು ಸಭೆ
ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ ಯೋಜನೆಗ ಬಗ್ಗೆ ಕರ್ನಾಟಕ ಸರ್ಕಾರವು ಜನವರಿ ೯ರಂದು ರಾಜ್ಯ ವನ್ಯಜೀವಿ ಮಂಡಳಿಯ ಸಭೆ ಕರೆಯಲಿದೆ. ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಈ ಸಭೆಯ ಅಧ್ಯಕ್ಷತೆ ವಹಿಸಿಕೊಳ್ಳಲಿದ್ದಾರೆ. ಸಮ್ಮಿಶ್ರ ಸರ್ಕಾರ ಅಧಿಕಾರ ವಹಿಸಿಕೊಂಡ ನಂತರ ಇದೇ ಮೊದಲ ವನ್ಯಜೀವಿ ಮಂಡಳಿಯ ಸಭೆ.
ಹುಬ್ಬಳ್ಳಿ-ಅಂಕೋಲಾ ರೈಲು ಯೋಜನೆಗೆ ಹಸಿರು ನಿಶಾನೆ ಕೊಡಲು ಈ ಸಭೆ ಸೇರಲಿದೆ ಎನ್ನಲಾಗಿದೆ. ಭಾರತೀಯ ವಿಜ್ಞಾನ ಸಂಸ್ಥೆಯ ಸಂಶೋಧಕರ ವರದಿಯನ್ನಾಧರಿಸಿ, ಮುಖ್ಯ ವನ್ಯಜೀವಿ ವಾರ್ಡನ್ ಜಯರಾಂ ಈ ರೈಲು ಯೋಜನೆಯ ಪ್ರಸ್ತಾಪ ಮಾಡಲಿದ್ದಾರೆ. ಜಯರಾಂ ಇನ್ನು ಕೆಲವು ತಿಂಗಳಲ್ಲಿ ನಿವೃತ್ತಿ ಪಡೆಯಲಿದ್ದಾರೆ.
ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರವು ಈ ಸಭೆಯಲ್ಲ ಪಾಲ್ಗೊಳ್ಳಲು ನಿರಾಕರಿಸಿದೆ. ರೈಲ್ವೆ ಇಲಾಖೆಯೂ ಸಹ ಈ ಸಭೆಗೆ ಉತ್ಸಾಹ ತೋರಿಸುತ್ತಿಲ್ಲ. ಅದು ಒಂದು ವಾರದ ಹಿಂದೆಯೇ ಈ ಯೋಜನೆಯಿಂದ ಹಿಂದೆ ಸರಿದಿತ್ತು. ಈ ರೈಲು ಮಾರ್ಗವು ಪರಿಸರ ದೃಷ್ಟಿಯಿಂದ ಸೂಕ್ಷ್ಮವಾದ ಪಶ್ಚಿಮ ಘಟ್ಟಗಳ ದಟ್ಟ ಕಾಡಿನ ಮೂಲಕವೇ ಹಾದುಹೋಗಬೇಕು ಎಂದು ಸ್ವತಃ ಮುಖ್ಯಮಂತ್ರಿಗಳೇ ಪಟ್ಟು ಹಿಡಿಯುತ್ತಿರುವಂತೆ ಕಾಣುತ್ತಿದೆ.
ಒಂದು ವೇಳೆ ರಾಜ್ಯ ವನ್ಯಜೀವಿ ಮಂಡಳಿಯು ಹಸಿರು ನಿಶಾನೆ ಕೊಟ್ಟರೆ, ಸೂಕ್ಷ್ಮವಾದ ಪಶ್ಚಿಮ ಘಟ್ಟಗಳಲ್ಲಿ ಎರಡು ಲಕ್ಷಕ್ಕಿಂತಲೂ ಹೆಚ್ಚು ಮರಗಳ ಮಾರಣಹೋಮವಾಗುತ್ತದೆ. ಜಾಗತಿಕ ತಾಪಮಾನ ಏರಿಕೆ ಇನ್ನೂ ಹೆಚ್ಚಾಗುತ್ತದೆ. ಪ್ರಕೃತಿ ವಿಕೋಪಗಳು ಆಗಾಗ್ಗೆ ಪುನರಾವರ್ತಿಸಲಿವೆ. ಇಷ್ಟೆಲ್ಲಾ ಆದರೂ ಕರ್ನಾಟಕ ಸರ್ಕಾರವು ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ ಯೋಜನೆಯನ್ನು ಕೈಬಿಡಲು ಸುತರಾಂ ಸಿದ್ಧವಿಲ್ಲ. ಈ ಯೋಜನೆಯು ಹತ್ತು ವರ್ಷಗಳ ಹಿಂದೆಯೇ ಸ್ಥಗಿತಗೊಳಿಸಲಾಗಿತ್ತು.
ಜನರ ಬೆಂಬಲದಿಂದ ಮಾತ್ರ ಈ ಯೋಜನೆಯನ್ನು ಸ್ಥಗಿತಗೊಳಿಸಿ, ಬಹಳ ಸೂಕ್ಷ್ಮವಾದ ಪರಿಸರ ಮತ್ತು ಕಾಡು ಪ್ರಾಣಿಗಳನ್ನು ಉಳಿಸುವುದು ಸಾಧ್ಯ.
